ಕೋಲ್ಕತ್ತಾ: ಗುಜರಾತ್ ನ ಸೂರತ್ ನಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ತೀವ್ರ ಅಪಘಾತ ಕಳೆದ ರಾತ್ರಿ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ.
ಜಲ್ಪೈಗುರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಜಲ್ದಾಕಾ ಸೇತುವೆ ಬಳಿ ಮಂಜಿನ ದಟ್ಟಣೆಯಿಂದ ದಾರಿ ಕಾಣದೇ ಅಪಘಾತ ಸಂಭವಿಸಿ ಇಬ್ಬರು ಪುರುಷರು, 5 ಮಕ್ಕಳು ಹಾಗೂ 6 ಮಹಿಳೆಯರು ಸೇರಿದಂತೆ 13 ಮಂದಿ ಮೃತಪಟ್ಟು 18 ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಟಾಟಾ ಮ್ಯಾಜಿಕ್ ಹಾಗೂ ಕಾರು ಧೂಪ್ ಗುರಿ ಕಡೆ ಪ್ರಯಾಣಿಸುತ್ತಿದ್ದು, ಮಂಜು ಆವರಿಸಿದ್ದರಿಂದ ದಾರಿ ಕಾಣದೇ ಟಾಟಾ ಮ್ಯಾಜಿಕ್ ಎದುರಿನಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆಯಲ್ಲಿ ಏಕಾಏಕಿ ಟ್ರಕ್ ಚಾಲನೆಯಾಗಿದೆ.
ಟ್ರಕ್ ನಲ್ಲಿದ್ದ ಕಲ್ಲುಗಳು ಬಿದ್ದು, ಅದೇ ದಾರಿಯಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹದಿಮೂರು ಮಂದಿ ಪ್ರಯಾಣಿಕರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಎಲ್ಲರೂ ಮದುವೆಗೆ ಹೊರಟಿದ್ದರು ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ನಾಲ್ಕು ಮಂದಿಯನ್ನು ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಗೆ, ಮೂವರನ್ನು ಉತ್ತರ ಬಂಗಾಲದ ಮೆಡಿಕಲ್ ಕಾಲೇಜ್ಗೆ, ಒಬ್ಬರನ್ನು ಜಲ್ಪೈಗುರಿ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.