ಬೆಳಗಾವಿ : ರಾಜ್ಯದಲ್ಲಿ ಈಗಾಗಲೇ ಕೊರೋನಾ ಸೋಂಕಿನ ಭೀತಿ, ಕೊರೋನಾ ಎರಡನೇ ಅಲೆಯ ನಡುವೆಯೂ ಶಾಲಾ-ಕಾಲೇಜು ಆರಂಭಗೊಂಡಿವೆ. ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ತರಗತಿ ಕೂಡ 9, 10, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಗೊಂಡಿವೆ. ಆದ್ರೇ ಇತರೆ ತರಗತಿಗಳು ವಿದ್ಯಾಗಮನದ ಮೂಲಕ ಶೈಕ್ಷಣಿಕ ತರಗತಿ ಮುಂದುವರೆಯುತ್ತಿದೆ. ಇದರ ಮಧ್ಯೆ ರಾಜ್ಯದಲ್ಲಿ 1 ರಿಂದ 5ನೇ ತರಗತಿಗಳು ಮಾತ್ರ ಆರಂಭಗೊಂಡಿಲ್ಲ. ಇಂತಹ ತರಗತಿಗಳನ್ನು ಆರಂಭಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಕೋವಿಡ್ ಕಾರಣದಿಂದ ತರಗತಿಗಳು ಆರಂಭವಾಗದೇ, ಮಕ್ಕಳು ಶಾಲೆಗೆ ತೆರಳದೇ ಅನೇಕ ಕಡೆಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹಾಗೂ ಬಾಲ್ಯ ವಿವಾಹ ಜಾಸ್ತಿಯಾಗಿದೆ ಎಂಬುದಾಗಿ ಕಳವಳ ವ್ಯಕ್ತ ಪಡಿಸಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ರಾಜ್ಯದಲ್ಲಿ ಫೆಬ್ರವರಿ 1ರಿಂದ 9 ಮತ್ತು 11ನೇ ತರಗತಿ ಆರಂಭಿಸಲಾಗಿದೆ. ಇದಾದ ಬಳಿಕ 1ನೇ ತರಗತಿ ಆರಂಭಕ್ಕೂ ಒತ್ತಾಯ ಕೇಳಿ ಬರುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ 1 ರಿಂದ 5ನೇ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಜೊತೆಗೆ ಮಧ್ಯಾಹ್ನದ ಬಿಸಿಯೂಟವೂ ಆರಂಭವಾಗಬೇಕಿದೆ. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.