ಮಂಗಳೂರು; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆಯ ಅಸೈಗೋಳಿಯಲ್ಲಿ ನಡೆದಿದೆ.ಅಸೈಗೋಳಿ ನಿವಾಸಿ ಜಯರಾಮ್ ಶೆಟ್ಟಿ ಎಂಬವರ ಪುತ್ರ ಅಭಿಲಾಷ್(35) ಆತ್ಮಹತ್ಯೆ ಮಾಡಿಕೊಂಡ ಯುವಕ.
ಬೆಳಿಗ್ಗೆ ವಾಕಿಂಗ್ ಗೆ ತೆರಳಿದ್ದ ಅಭಿಲಾಷ್, ವಾಪಸ್ಸಾಗಿ ಮನೆಯಲ್ಲೆ ಇದ್ದರು. ಅಭಿಲಾಷ್ ತಾಯಿ ಮದುವೆಗೆಂದು ತೆರಳಿದ್ದರು. ತಂದೆ ಮನೆಯ ಹೊರಗೆ ಕುಳಿತಿದ್ದ ಸಂದರ್ಭ ಅಭಿಲಾಷ್ ಮನೆಯ ಕೋಣೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೆಡಿಕಲ್ ರೆಪ್ ಆಗಿದ್ದ ಅಭಿಲಾಷ್ ಒಂದು ತಿಂಗಳಿನಿಂದ ಮನೆಯಲ್ಲೇ ಲ್ಯಾಪ್ ಟಾಪ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಭಿಲಾಷ್ ಕಳೆದ ಕೆಲ ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪ್ರತಿವರ್ಷವೂ ಶಬರಿಮಲೆ ತೆರಳಲು ಮಾಲಾಧಾರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಮಾಡಿಲ್ಲ ಎನ್ನಲಾಗಿದೆ.
ತಂದೆ ಜಯರಾಮ್ ಶೆಟ್ಟಿ ವೃತ್ತಿಯಲ್ಲಿ ಟೈಲರ್ ಆಗಿದ್ದು, ಅಸೈಗೋಳಿ ತಮ್ಮ ಅಂಗಡಿಯಿಂದ ಹೊರಬರುತ್ತಿದ್ದ ಸಂದರ್ಭ ಅಪಘಾತಕ್ಕೀಡಾಗಿ ಕೆಲಕಾಲ ಅಸೌಖ್ಯದಿಂದ ಇದ್ದರು. ಇತ್ತೀಚೆಗಷ್ಟೇ ಚೇತರಿಸಿಕೊಂಡು ನಡೆದುಕೊಂಡು ಹೋಗುವ ಹಂತಕ್ಕೆ ತಲುಪಿದ್ದರು.