ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬಂಟ್ವಾಳದ ಸಜೀಪನಡು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿಶಾಭಾಗ್ ಎಂಬಲ್ಲಿ ಜಿ.ಪಂ.ಮಾಜಿ ಸದಸ್ಯ ಎಸ್.ಅಬ್ಬಾಸ್ ಅವರ ಮನೆಗೆ ನುಗ್ಗಿದ ಕಳ್ಳರು ಸುಮಾರು ಒಟ್ಟು 12.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದಾರೆ.
ಈ ಬಗ್ಗೆ ಅವರ ಪುತ್ರ ಮೊಹಮ್ಮದ್ ನಜೀಬ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಮನೆಯವರು ಡಿ. 13ರಂದು ಮಧ್ಯಾಹ್ನ 2.30ರ ಸುಮಾರಿಗೆ ಅತ್ತೆ ಮನೆಗೆ ಹೋಗಿದ್ದು, ರಾತ್ರಿ 8.10ರ ಸುಮಾರಿಗೆ ಹಿಂದಿರುಗಿ ಬಂದಾಗ ಕಳ್ಳತನವಾಗಿರೋದು ಗೊತ್ತಾಗಿದೆ.
ನಜೀಬ್ ಅವರ ತಾಯಿ ಮಲಗುವ ಕೋಣೆಯಲ್ಲಿದ್ದ ಕಪಾಟಿನ ಸೇಫ್ ಲಾಕರನ್ನು ಆಯುಧದಿಂದ ಮೀಟಿ ಪರ್ಸ್ ನಲ್ಲಿದ್ದ 1.40 ಲಕ್ಷ ರೂ. ನಗದು, 3 ಪವನ್ ತೂಕದ 3 ಕೈ ಬಳೆಗಳು, ತಲಾ ಒಂದು ಪವನ್ ತೂಕದ 3 ಉಂಗುರಗಳು, 7 ಪವನ್ ತೂಕದ ಚಿನ್ನದ ಚೈನ್, ನಜೀಬ್ ಅವರ ಕೋಣೆಯ ಕಪಾಟಿನಲ್ಲಿದ್ದ ಸೇಫ್ ಲಾಕರ್ ಮುರಿದು 4 ಪವನ್ ತೂಕದ ಕೊರಳಿನ ಮಾಲೆ, 4 ಪವನ್ ತೂಕದ ಕೈ ಬಳೆ ಸಹಿತ ಇತರ ಚಿನ್ನಾಭರಣ ಸೇರಿ ಒಟ್ಟು 36 ಪವನ್ ತೂಕದ ಚಿನ್ನಾಭರಣ ಕಳವು ನಡೆಸಿದ್ದಾರೆ.
ಕಳ್ಳರು ಮನೆಯ ಮೇಲಿನ ಮಹಡಿಯ ಹಿಂಬದಿಯ ಬಾಗಿಲನ್ನು ಮುರಿದು ಒಳ ನುಗ್ಗಿದ್ದು, ಕಳವಾದ ಚಿನ್ನದ ಮೌಲ್ಯದ 11 ಲಕ್ಷ ರೂ.,1.40 ಲಕ್ಷ ರೂ. ನಗದು ಸೇರಿ ಒಟ್ಟು 12.40 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.