ಬೆಳ್ತಂಗಡಿ ;ಸ್ವಸಹಾಯ ಸಂಘದಿಂದ ಲೋನ್ ಪಡೆದು ಬೇರೆಯವರಿಗೆ ನೀಡಿ ಅವರು ಸರಿಯಾದ ಸಮಯಕ್ಕೆ ಕಟ್ಟದೇ ಬ್ಯಾಂಕ್ ನವರು ನಿತ್ಯ ಕಿರುಕುಳ ಮಾಡುತ್ತಿದ್ದರಿಂದ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಂದ್ರಾಳ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ್ ಪೂಜಾರಿ(23) ಮೃತ ದುರ್ದೈವಿ.
ಒಂದು ವಾರದ ಹಿಂದೆ ಚಂದ್ರಶೇಖರ್ ಪೂಜಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಚಂದ್ರಶೇಖರ್ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಇನ್ನು ಚಂದ್ರಶೇಖರ್ ಶಬರಿ ಅನ್ನೋ ಸ್ವಸಹಾಯ ಸಂಘದ ಸದಸ್ಯರಾಗಿದ್ದರು. 8 ಜನ ಸೇರಿ ಸಂಘ ಮಾಡಿದ್ದರು.ಸಂಘದ ಮುಖಾಂತರ ಉಜಿರೆಯ ಖಾಸಗಿ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು.ಅದನ್ನು 8 ಜನ ಹಂಚಿಕೊಂಡಿದ್ದರು.ಆದರೆ ಚಂದ್ರಶೇಖರ್ ಅವರ ಹಣವನ್ನು ಯೋಗೀಶ್ ಎಂಬಾತ ಪಡೆದುಕೊಂಡಿದ್ದ. ಆದರೆ ಆತ ಸಕಾಲಕ್ಕೆ ಕಟ್ಟದ ಕಾರಣ ಪದೇ ಪದೇ ಚಂದ್ರಶೇಖರ್ ಅವರಿಗೆ ಬ್ಯಾಂಕ್ ನಿಂದ ಕರೆ ಬರುತ್ತಿತ್ತು. ಇದನ್ನು ಸಂಘದ ಇತರ ಸದಸ್ಯರಾದ ಸಚಿನ್,ಯೋಗೀಶ್, ನಾರಾಯಣ, ಸುದರ್ಶನ್ ಎಂಬವರ ಗಮನಕ್ಕೆ ತಂದಿದ್ದರು. ಈ ವೇಳೆ ಅವರೆಲ್ಲಾ ಚಂದ್ರಶೇಖರ್ ಅವರನ್ನು ಬೈದು ಜೀವ ಬೆದರಿಕೆ ಹಾಕಿದ್ರು ಎನ್ನಲಾಗಿದೆ. ಇದರಿಂದ ಚಂದ್ರಶೇಖರ್ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಾಯಿ ಪುಷ್ಪಾವತಿ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.