ಕೇರಳ: ಇತ್ತೀಚೆಗಷ್ಟೇ ಕೇರಳ ಓಣಂ ಲಾಟರಿಯಲ್ಲಿ ಕೇರಳದ ಆಟೋ ಚಾಲಕ ಅನೂಪ್ ಗೆ 25 ಕೋಟಿ ಗೆಲ್ಲುತ್ತಿದ್ದಂತೆ ಅನೂಪ್ ಯಪ್ಪಾ ಇವತ್ತಿಗೆ ನನ್ನ ಕಷ್ಟಗಳೆಲ್ಲಾ ಕಳೀತು. ಇನ್ನೂ ಬದುಕು ಸೂಪರ್ ಅಂತಾ ಲೆಕ್ಕಾಚಾರ ಹಾಕಿದ್ರು. ಜನ ಕೂಡ ಇದೇ ರೀತಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಲಾಟರಿ ಗೆದ್ದಿದ್ದೇ ಅನೂಪ್ ಪಾಲಿನ ನೆಮ್ಮದಿಯನ್ನು ಕಸಿದುಕೊಂಡಿದೆ.
ಸ್ವತಃ ಅನೂಪ್ ಅವರೇ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕಿದ್ದಾರೆ. ಜನರಿಂದ ತಪ್ಪಿಸಿಕೊಳ್ಳೋದೇ ಅನೂಪ್ ಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ‘ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಮಗನಿಗೆ ಹುಷಾರಿಲ್ಲ. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಆಗುತ್ತಿಲ್ಲ. ಜನರಿಂದ ತಪ್ಪಿಸಿಕೊಂಡು ಕಳ್ಳನಂತೆ ಓಡಾಡುತ್ತಿದ್ದೇನೆ. ಇದೆಲ್ಲಾ ಬೇಕಾ ಅಂತಾ ಅನ್ನಿಸ್ತಿದೆ ಎಂದು ಅನೂಪ್ ಹೇಳಿದ್ದಾರೆ.
ಅನೂಪ್ ಲಾಟರಿ ಗೆದ್ದ ವಿತಾರ ತಿಳಿಯುತ್ತಿದ್ದಂತೆ ಮನೆ ಬಳಿ ದುಡ್ಡಿನ ಸಹಾಯ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅಂತೆ. ದುಡ್ಡು ನನ್ನ ಕೈ ಸೇರಿಲ್ಲ ಅಂದ್ರೂ ಜನ ನಂಬುತ್ತಿಲ್ಲ. ಪರೇ ಪದೇ ಬಂದು ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದರಿಂದ ಬೇಸತ್ತಿರುವ ಅನೂಪ್ ಅವರು ಮನೆಯಿಂದ ಓಡಿಹೋಗಿದ್ದಾರೆ. ತಮ್ಮ ಸಹೋದರಿಯ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಉಳಿಯುತ್ತಿದ್ದಾರೆ.
ಶುಕ್ರವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನೂಪ್ ಅವರು, ‘ನನಗೆ ಇನ್ನೂ ಹಣ ಬಂದಿಲ್ಲ ಎಂದು ಹೇಳಿದರೆ ಯಾರೂ ನಂಬುತ್ತಿಲ್ಲ. ನಾನು ಈಗ ಇರುವ ಮನೆಯನ್ನು ಬದಲಾಯಿಸಬೇಕು ಎಂದಿದ್ದೇನೆ’ ಎಂದು ಹೇಳಿದ್ದಾರೆ.
ಅನೂಪ್ ಅವರ ಸಂಬಂಧಿಕರಾದ ಸೂರಜ್ ಅವರು ಮಾತನಾಡಿ, ‘ಹಣದ ಸಹಾಯ ಕೇಳಿಕೊಂಡು ಬರುತ್ತಿರುವವರಿಂದ ತಪ್ಪಿಸಿಕೊಳ್ಳಲು ದೂರದ ಊರುಗಳಿಗೆ ಅನೂಪ್ ಅವರು ಓಡಿಹೋಗುವಂತಾಗಿದೆ. ಆತನ ಮಗನಿಗೆ ಆರೋಗ್ಯ ಸರಿಯಿಲ್ಲ. ಆತನ ಹೆಂಡತಿ ಬಸುರಿ. ಆದರೂ ಆತನಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.