ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ನಿನ್ನೆ ತಡ ರಾತ್ರಿ ಬಿ.ಸಿ.ರೋಡ್ ಸಮೀಪದ ಪೊನ್ನೋಡಿ ಎಂಬಲ್ಲಿನ ಕೆಎಸ್ಸಾರ್ಟಿಸಿ ಬಸ್ ಡಿಪ್ಪೋದ ಬಳಿ ನಡೆದಿದೆ.
ಬಿ.ಸಿ.ರೋಡ್ ಕೈಕಂಬ ಸಮೀಪದ ಶಾಂತಿ ಅಂಗಡಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಮುಹಮ್ಮದ್ ಆಸಿಫ್ (32) ಕೊಲೆಯಾದ ಯುವಕ. ಬಂಟ್ವಾಳದ ಮಾರಿಪಳ್ಳ ನಿವಾಸಿಗಳಾದ ನೌಫಲ್ ಮತ್ತು ನೌಶೀರ್ ಎಂಬವರು ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಬಸ್ ಡಿಪೋದ ಬಳಿ ಇರುವ ಹೊಟೇಲ್ ಬಳಿ ಆಸಿಫ್ ಬೈಕ್ ನಲ್ಲಿ ಹಾರ್ನ್ ಮಾಡಿರದಕ್ಕೆ ನೌಫಲ್ ಮತ್ತು ನೌಶೀರ್ ಆಕ್ಷೇಪ ವ್ಯಕ್ತಪಡಿಸಿದ್ದು ಈ ವೇಳೆ ಮೂವರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಬಳಿಕ ಆಸಿಫ್ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆದಿದ್ದು ಎರಡು ಕಡೆಯವರ ನಡುವೆ ಮತ್ತೆ ವಾಗ್ವಾದ, ಗಲಾಟೆ ನಡೆದಿದೆ ಎನ್ನಲಾಗಿದ್ದು ಕೊನೆಗೆ ನೌಫಲ್ ಮತ್ತು ನೌಶೀರ್ ಸೇರಿ ಆಸಿಫ್ ಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಆಸಿಫ್ ರನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮಧ್ಯೆ ನೌಫಲ್ ಮತ್ತು ನೌಶೀರ್ ಆಸ್ಪತ್ರೆಗೆ ದಾಖಲಾಗಿದ್ದು ಆಸಿಫ್ ನ ತಂಡ ನಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ.
ಮೃತ ಆಸಿಫ್ ವಿವಾಹಿತನಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.