ಬೆಂಗಳೂರು: ನಿನ್ನೆ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಮತ್ತು ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ಸೇವೆಯಿಂದ ಅಮನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಭೂ ವ್ಯಾಜ್ಯ ಸಂಬಂಧ ಲಂಚ ಪ್ರಕರಣದಲ್ಲಿ ಅರೋಪಿಯಾಗಿರುವ ಐಎಎಸ್ ಅಧಿಕಾರಿ ಮಂಜುನಾಥ್ ಅವರನ್ನು ನಿನ್ನೆ ಸಂಜೆ ಎಸಿಬಿ ಬಂಧಿಸಿತ್ತು.
ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ನಿನ್ನೆ ಮಧ್ಯಾಹ್ನ ಸಿಐಡಿ ಬಂಧಿಸಿತ್ತು. ಇಬ್ಬರೂ ಅಧಿಕಾರಿಗಳ ಬಂಧನದ ಬೆನ್ನಲ್ಲೇ ನಿನ್ನೆ ರಾತ್ರಿ ರಾಜ್ಯ ಸರ್ಕಾರ ಅಮಾನತು ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಡಿಸಿ ಆಗಿದ್ದ ವೇಳೆ ಲಂಚ ಆರೋಪ ಎದುರಿಸಿದ್ದ ಮಂಜುನಾಥ್ ಅವರನ್ನು ಆರೋಪದ ಬಳಿಕ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಡೈರೆಕ್ಟರ್ ಆಗಿ ರಾಜ್ಯ ಸರ್ಕಾರ ವರ್ಗಾಯಿಸಿತ್ತು. ನಿನ್ನೆ ಬಂಧನದ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ವೇಳೆ ಪರೀಕ್ಷೆ ಅಕ್ರಮ ಆರೋಪ ಎದುರಿಸಿದ್ದ ಅಮೃತ್ ಪೌಲ್ ಅವರನ್ನು ಸರ್ಕಾರ ಆಂತರಿಕ ಭದ್ರತಾ ದಳದ ಎಡಿಜಿಪಿಯಾಗಿ ವರ್ಗಾವಣೆ ಮಾಡಿತ್ತು. ನಿನ್ನೆ ಬಂಧನದ ಬಳಿಕ ಸಿಐಡಿ ವಶಕ್ಕೆ ನೀಡಲಾಗಿದೆ.