ವೇಣೂರು: ತನ್ನ ಬಟ್ಟೆ ಸುಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಕೆಲಸಗಾರನೊಬ್ಬ ಮಾಲೀಕನ ವಾಹನವನ್ನು ಸುಟ್ಟ ಘಟನೆ ವೇಣೂರಿನಲ್ಲಿ ನಡೆದಿದೆ.
ಆರೋಪಿಯನ್ನು ಪ್ರಭಾಕರ ಎಂದು ಗುರುತಿಸಲಾಗಿದೆ. ಪಾಸ್ಕಲ್ ಪಿಂಟೋ ಎಂಬುವವರು ವೇಣೂರು ಪೇಟೆಯಲ್ಲಿ ಪಿಂಟೋ ಕೋಲ್ಡ್ ಸ್ಟೋರೇಜ್ ಎಂಬ ಮಾಂಸದ ಅಂಗಡಿಯನ್ನು ನಡೆಸುತ್ತಿದ್ದರು.ಹಗಲಿಡೀ ಗಂಡ ಹೆಂಡತಿ ಅಂಗಡಿಯಲ್ಲೇ ಇರುತ್ತಿದ್ದರು. ಈ ವಿಷಯ ತಿಳಿದಿದ್ದ ಆರೋಪಿ ಪ್ರಭಾಕರ, ಪಾಸ್ಕಲ್ ಪಿಂಟೋರವರ ವಾಹನಾ ಶೆಡ್ ನಲ್ಲಿದ್ದ ಯಮಹಾ ಸ್ಕೂಟರ್ ಹಾಗೂ ಓಮ್ನಿಗೆ ಬೆಂಕಿ ಹಚ್ಚಿದ್ದಾನೆ.
ವಾಹನ ಶೆಡ್ ನಲ್ಲಿ ಬೆಂಕಿ ಉರಿಯುತ್ತಿರುದನ್ನು ಗಮನಿಸಿದ ಪಾಸ್ಕಲ್ ಪಿಂಟೋರವರ ತಾಯಿ ತಕ್ಷಣ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ.ಯಮಹಾ ಸ್ಕೂಟರ್ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟಿದ್ದು,ಅದರ ಪಕ್ಕದಲ್ಲಿದ್ದ ಓಮ್ನಿ ವಾಹನ ಕೂಡಾ ಭಾಗಶಃ ಸುಟ್ಟಿದೆ. ತಕ್ಷಣ ಅಲ್ಲೆ ಪಕ್ಕದಲ್ಲಿ ಅಳವಡಿಸಿದ್ದ ಬೋರ್ ವೆಲ್ ನ ನೀರಿನ ಮೂಲಕ ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಕೂಡ ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಆರೋಪಿ ಪ್ರಭಾಕರ್ 6 ತಿಂಗಳ ಹಿಂದೆ ಪಾಸ್ಕಲ್ ಪಿಂಟೋ ರವರ ಅಂಗಡಿಯಲ್ಲಿ ಕೆಲಸಕ್ಕಿದ್ದನು. ಘಟನೆ ಸಮಯದಲ್ಲಿ ಆತ,’ನನ್ನ ಬಟ್ಟೆಯನ್ನು ಈ ಹಿಂದೆ ನೀವು ಸುಟ್ಟುದ್ದೀರಿ ಅದಕ್ಕಾಗಿ ನಾನೇ ನಿಮ್ಮ ವಾಹನ ಸುಟ್ಟಿರುತ್ತೇನೆ ನೀವು ಮಾಡುವುದನ್ನು ಮಾಡಿ’ ಎಂದು ಆವಾಜ್ ಹಾಕಿ ಅಲ್ಲಿಂದ ಹೋಗಿದ್ದಾನೆ.
ಸುಟ್ಟು ಹೋದ ಯಮಹಾ ಮೋಟಾರು ಸೈಕಲಿನ ಅಂದಾಜು ಮೌಲ್ಯ 30.000 ರೂ. ಮತ್ತು ಓಮಿನಿ ಕಾರಿನ ಒಟ್ಟು ಅಂದಾಜು ಮೌಲ್ಯ1,20.000 ರೂ . ಆಗಿದ್ದು ನಷ್ಟದ ಒಟ್ಟು ಮೊತ್ತ 1,50.000 ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.