ಚೆನ್ನೈ : ಮುಳುಗುತ್ತಿದ್ದ ಯುವಕರನ್ನು, ಮೂವರು ಮಹಿಳೆಯರು ತಾವುಟ್ಟಿದ್ದ ಸೀರೆಯನ್ನು ಎಸೆದು ರಕ್ಷಿಸಿದ ಘಟನೆ, ತಮಿಳು ನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ವರದಿಯಾಗಿದೆ.
ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೆರಂಬಲೂರು ಜಿಲ್ಲೆಯ ಕೊಟ್ಟಾರೈ ಅಣೆಕಟ್ಟಿನ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಿದ್ದ ಮಹಿಳೆಯರಾದ ಸೆಂದಮಿಳ್ ಸೆಲ್ವಿ, ಮುತ್ತುಮಾಲ್ ಮತ್ತು ಅನಂತವಲ್ಲಿ ಅವರ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆಗಸ್ಟ್ 6ರಂದು ಸಿರೂವಾಚೂರ್ ಗ್ರಾಮದ 12 ಯುವಕರ ಗುಂಪು ಕೊಟ್ಟಾರೈ ಗ್ರಾಮದ ಬಳಿ ಕ್ರಿಕೆಟ್ ಆಡಲು ಹೊರಟಿತ್ತು. ಕ್ರಿಕೆಟ್ ಆಡಿದ ನಂತರ ಯುವಕರು ಕೊಟ್ಟಾರೈ ಅಣೆಕಟ್ಟಿನಲ್ಲಿ ಸ್ನಾನ ಮಾಡಲು ಬಂದಿದ್ದರು. ಆ ವೇಳೆ, ಮೂವರು ಮಹಿಳೆಯರು ಸ್ನಾನ ಮುಗಿಸಿ, ಬಟ್ಟೆ ಒಗೆದು ತಮ್ಮತಮ್ಮ ಮನೆಗೆ ಹೊರಡಲು ಮುಂದಾಗಿದ್ದರು. ಈ ವೇಳೆ ಯುವಕರ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮಹಿಳೆಯರು ಯುವಕರನ್ನು ರಕ್ಷಿಸಿದ್ದಾರೆ.
“ಅಣೆಕಟ್ಟಿನಲ್ಲಿ ಸ್ನಾನಕ್ಕೆ ಇಳಿಯಲು ಮುಂದಾಗಿದ್ದ ಯುವಕರಿಗೆ ನೀರಿನ ಸೆಳೆತದ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದೆವು. ಅಷ್ಟರಲ್ಲಿ ನಾಲ್ವರು ಯುವಕರು ಆಯತಪ್ಪಿ ಅಣೆಕಟ್ಟಿಗೆ ಬಿದ್ದರು” ಎಂದು ಸೆಂದಮಿಳ್ ಸೆಲ್ವಿ ಹೇಳಿದ್ದಾರೆ.
“ಆ ವೇಳೆ ನಾವು ಹಿಂದೆಮುಂದೆ ನೋಡದೇ, ನಾವುಟ್ಟಿದ್ದ ಸೀರೆಯನ್ನು ಯುವಕರು ಬಿದ್ದ ಜಾಗಕ್ಕೆ ಬಿಸಾಕಿದೆವು. ಆದರೆ, ಅಣೆಕಟ್ಟಿಗೆ ಬಿದ್ದ ನಾಲ್ವರಲ್ಲಿ ಇಬ್ಬರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು”ಎಂದು ಸೆಂದಮಿಳ್ ಸೆಲ್ವಿ ಹೇಳಿದ್ದಾರೆ.
ಮಾರುದೈರು ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೊಟ್ಟಾರೈ ಅಣೆಕಟ್ಟಿನ ನೀರಿನ ಆಳ ಸುಮಾರು ಇಪ್ಪತ್ತು ಅಡಿಗಳಿಷ್ಟಿವೆ. ನೀರಿನಲ್ಲಿ ಮುಳುಗಿದ್ದ ಇತರ ಇಬ್ಬರ ಮೃತ ದೇಹವನ್ನು ಅಗ್ನಿಶಾಮಕ ದಳದವರು ಹೊರ ತೆಗೆದಿದ್ದಾರೆ.