ಕೇರಳ; ಕಂಡು ಕೇಳರಿಯದ ಮಹಾ ದುರಂತಕ್ಕೆ ದೇವರ ನಾಡು ಕೇರಳ ನಲುಗಿ ಹೋಗಿದೆ. ಮಹಾ ದುರಂತದಿಂದಾಗಿ ಸ್ವರ್ಗದಂತಿದ್ದ ವಯನಾಡು ಇದೀಗ ಅಕ್ಷರಶಃ ನರಕವಾಗಿದೆ.ಈ ಮಹಾ ದುರಂತದಲ್ಲಿ ಬದುಕಿ ಬಂದ ಒಬ್ಬೊಬ್ಬರದ್ದು ಒಂದೊಂದು ಕಥೆ ಎಂಬಂತಾಗಿದೆ. ಭೂಕುಸಿತ ದುರಂತದಲ್ಲಿ ಸಿಲುಕಿದ್ದ ಕುಟುಂಬವೊಂದನ್ನು ಮಹಾ ಪವಾಡ ಅನ್ನೋ ರೀತಿಯಲ್ಲಿ ಕಾಡಾನೆಯೊಂದು ರಕ್ಷಿಸಿದೆ.
ಹೌದು.. ಸುಜಾತಾ ಅವರು 18 ವರ್ಷಗಳಿಂದ ಮುಂಡಕ್ಕೈನಲ್ಲಿರುವ ಹ್ಯಾರಿಸನ್ಸ್ ಮಲಯಾಳಂ ಟೀ ಎಸ್ಟೇಟ್ನಲ್ಲಿ ಟೀ ಪಿಕ್ಕರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಮಗಳು ಸುಜಿತಾ, ಪತಿ ಕುಟ್ಟನ್ ಮತ್ತು ಮೊಮ್ಮಕ್ಕಳಾದ ಸೂರಜ್ (18) ಮತ್ತು ಮೃದುಲಾ (12) ಅವರೊಂದಿಗೆ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಭಾರೀ ಮಳೆಯಾಗುತ್ತಿದ್ದರಿಂದ, ಸುಜಾತ ಅವರಿಗೆ 1.15 ಕ್ಕೆ ಎಚ್ಚರವಾಗಿದೆ. ಆಗ ಮನೆಗೆ ನೀರು ನುಗ್ಗಿದೆ. ಎಲ್ಲರು ಎಚ್ಚರಗೊಂಡಿದ್ದಾರೆ. ಕೆಲ ಹೊತ್ತಲ್ಲೇ ಮನೆ ಕುಸಿಯತೊಡಗಿದೆ. ಮನೆಯ ಮೇಲ್ಛಾವಣಿ ಕುಸಿದಿದೆ. ಈ ವೇಳೆ ಸುಜಾತ ಅವರ ಮಗಳಿಗೆ ಗಾಯವಾಗಿದೆ. ಆಕೆಯನ್ನು ಮನೆಯವರೆಲ್ಲಾ ಸೇರಿ ರಕ್ಷಿಸಿದ್ದಾರೆ. ಕೂಡಲೇ ಮನೆಯಲ್ಲಿದ್ದರೆ ಅಪಾಯ ಅಂತಾ ಯೋಚಿಸಿದ ಅವರು ಗುಡ್ಡ ಪ್ರದೇಶಕ್ಕೆ ಹೋಗಿದ್ದಾರೆ.
ಗುಡ್ಡಕ್ಕೆ ಹೋದಾಗ ತಮ್ಮ ಪಕ್ಕದಲ್ಲೇ ಆನೆ ಇರುವುದು ಗೊತ್ತಾಗಿದೆ. ಆದರೆ ಸ್ಥಳದಿಂದ ಕದಲದೇ ಅಲ್ಲೇ ನಿಂತಿದ್ದಾರೆ. ಭಯದಿಂದ ದಿಕ್ಕೇತೋಚದಾದ ಆ ತಾಯಿ ಆನೆ ಎದುರು ನಿಂತು, ದೊಡ್ಡ ದುರಂತದಿಂದ ಬಂದಿದ್ದೇವೆ. ನಮಗೆ ಏನು ಮಾಡಬೇಡಿ ಎಂದು ಕೈ ಮುಗಿದಿದ್ದಾರೆ. ಅವರ ಪರಿಸ್ಥಿತಿ ನೋಡಿ ಆನೆಯ ಕಣ್ಣಲ್ಲೂ ನೀರು ಬಂತು ಎಂಜು ಸುಜಾತ ಹೇಳಿದ್ದಾರೆ. ಆನೆ ಸ್ವಲ್ಪವೂ ಮಿಸುಕಾಡದೆ ನಿಂತಿದೆ. ಆ ಕುಟುಂಬ ಬೆಳಿಗ್ಗಿನವರೆಗೇ ಕಾಡಾನೆಯ ಕಾಲಬುಡದಲ್ಲಿ ಆಶ್ರಯ ಪಡೆದಿದೆ.ನಾವು ಬೆಳಿಗ್ಗೆ 6 ಗಂಟೆಯವರೆಗೆ ಅಲ್ಲೇ ಇದ್ದೆವು, ಮತ್ತು ಬೆಳಿಗ್ಗೆ ಕೆಲವು ಜನರು ನಮ್ಮನ್ನು ರಕ್ಷಿಸುವವರೆಗೂ ಆನೆಯೂ ನಿಂತಿತ್ತು ಎಂದಿದ್ದಾರೆ.
ಸುಜಾತ ಅವರ ಮಾತುಗಳನ್ನು ಕೇಳಿದ್ರೆ ಎಂಥವರಿಗಾದ್ರೂ ಪವಾಡ ಅನ್ಸುತ್ತೆ. ಪ್ರಾಣಿಗಳು ಗುಣದಲಿ ಮೇಲು ಅನ್ನೋದು ಅಕ್ಷರಶಃ ಸತ್ಯ.


