ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಕೇಸರಿಕರಣ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅವರು ಮೊದಲು ಬ್ರಿಟಿಷೀಕರಣ, ಅರೇಬೀಕರಣ, ಮೊಘಲೀಕರಣ ಮನಸ್ಥಿತಿಯಿಂದ ಹೊರ ಬರಲಿ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕೇಸರಿಯೇನು ನಿಷೇಧಿತ ಬಣ್ಣವಲ್ಲ. ಇಂದಿರಾ ಗಾಂಧಿಗೆ ತಂದೆ ನೆಹರು ಬರೆದ ಪತ್ರವಾದರೆ ಓದಬಹುದು. ಆದರೆ ಹೆಡ್ಗೆವಾರ್ ಬರೆದ ಸಂದೇಶ ಯಾಕೆ ಓದಬಾರದು? ಎಲ್ಲವನ್ನೂ ಕೆಟ್ಟ ಮನಸ್ಥಿತಿಯಿಂದ ನೋಡುವವರಿಗೆ ಕೆಟ್ಟದೇ ಕಾಣುತ್ತದೆ. ಮಾನಸಿಕವಾಗಿ ಅವರು ಇನ್ನೂ ಬ್ರಿಟೀಷರ ಗುಲಾಮಗಿರಿಯಲ್ಲಿಯೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಸರಿಕರಣ ಎಂದು ಆರೋಪಿಸುವುದು ಬಹಳ ಹಿಂದಿನದ್ದು, ಕೇಸರಿ ಬಣ್ಣದಿಂದ ಸಾಕಷ್ಟು ಜನ ಪ್ರೇರಣೆಗೊಂಡಿದ್ದಾರೆ. ಇದು ಕೇಸರಿಕರಣವಲ್ಲ ಭಾರತೀಕರಣ. ಕೇಸರಿಕರಣ ವಿರೋಧಿಸುವವರು ಬ್ರಿಟೀಷ್ ಮಾನಸಿಕತೆಯವರು, ಮೊಘಲ್ ಮಾನಸಿಕತೆಯವರು. ಆ ಮಾನಸಿಕತೆಯಿಂದ ಮೊದಲು ಹೊರಬರಲಿ ಭಾರತೀಕರಣದ ಬಗ್ಗೆ ಮಾತನಾಡಲಿ ಎಂದು ಹೇಳಿದರು.