ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿ ಗೋಷ್ಠಿಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆಯವರೇ, ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸೋಣ, ಆದರೆ ನಾನು ಕೇಳುವ ಪ್ರಶ್ನೆಗೆ ಮೊದಲು ಉತ್ತರಿಸಿ ಎಂದು ಹೇಳಿರುವ ಸಚಿವ ಸುನೀಲ್ ಕುಮಾರ್, ಚಿತ್ತಾಪುರ ಮೀಸಲು ಕ್ಷೇತ್ರವನ್ನು ಸಾಮಾನ್ಯ ದಲಿತ ಕುಟುಂಬದಿಂದ ಬಂದ ವ್ಯಕ್ತಿಗೆ ಯಾವಾಗ ಬಿಟ್ಟು ಕೊಡುತ್ತೀರಿ? ಇದು ನಿಮ್ಮಿಂದ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ನೀವು ಆ ಉದಾರತೆಯನ್ನು ತೋರಿದರೆ ನಾವು ನಿಮ್ಮನ್ನು ಗೌರವಿಸಿ ಆರಾಧಿಸುತ್ತೇವೆ, ಯೋಚಿಸಿ ಉತ್ತರಿಸಿ ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ನಾರಾಯಣ ಗುರು ಸ್ತಬ್ದಚಿತ್ರ ಮತ್ತು ಪಠ್ಯ ಪುಸ್ತಕದಿಂದ ಕೈ ಬಿಟ್ಟ ವಿಚಾರದಲ್ಲಿ ಸಚಿವ ಸುನೀಲ್ ಕುಮಾರ್ ಯಾಕೆ ಮೌನವಾಗಿದ್ದಾರೆ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದರು.