ಮಂಜೇಶ್ವರ : ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಜಿಲ್ಲೆಯಾದ ಕಾಸರಗೋಡಿನ ಬಾಯಾರು ಸಮೀಪದ ಕನಿಯಾಲ ಗುರುಕುಮೇರಿ ಎಂಬಲ್ಲಿ ನಿನ್ನೆ ಉದಯ್ ಎಂಬ ಮಾನಸಿಕ ಅಸ್ವಸ್ಥ ನಾಲ್ವರನ್ನು ಕೊಲೆಗೈದಿದ್ದ. ಈತನ ಹುಚ್ಚಿಗೆ ಚಿಕ್ಕಮ್ಮ ಹಾಗೂ ಮೂವರು ಮಾವಂದಿರು ಬಲಿಯಾಗಿದ್ದರು. ಆದರೆ ಈ ಕೊಲೆಗೆ ಆತನಿಗೆ ಮದುವೆ ಆಗಿಲ್ಲ ಕೋಪವೇ ಕಾರಣ ಎಂದು ಹೇಳಲಾಗುತ್ತಿದೆ.
ಉದಯ್ಗೆ ಇನ್ನೂ ಮದುವೆಯಾಗಿರಲಿಲ್ಲ. ಮೊದಲೇ ಮಾನಸಿಕವಾಗಿ ಅಷ್ಟೊಂದು ಸ್ಥಿಮಿತದಲ್ಲಿ ಇಲ್ಲದಿದ್ದ ಈತ ಮದುವೆಯಾಗದೇ ಉಳಿದಿದ್ದ ಕಾರಣ, ಮತ್ತಷ್ಟು ಹುಚ್ಚನಾಗಿದ್ದ. ಇವನಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಚಿಕಿತ್ಸೆ ಕೊಡುತ್ತಿದ್ದರೂ ಸದಾ ಮದುವೆಯ ಬಗ್ಗೆ ಈತ ಮಾತನಾಡುತ್ತಿದ್ದ. ಆದರೆ ಈತನ ಹುಚ್ಚಿನಿಂದಾಗಿ ಮನೆಯವರು ಮದುವೆ ಮಾಡಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ತನಗೆ ಮದುವೆ ಮಾಡಿಸಿಲ್ಲ ಎಂದು ತನ್ನ ಸಂಬಂಧಿಗಳೊಂದಿಗೆ ಆಗಾಗ ಉದಯ್ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ತನಗೆ ಮದುವೆ ಮಾಡಿಸದೇ ಹೋದರೆ ಕೊಲೆ ಮಾಡುವುದಾಗಿ ಕೆಲವು ದಿನಗಳ ಹಿಂದೆ ಆರೋಪಿ ಎಲ್ಲರನ್ನೂ ಬೆದರಿಕೆ ಹಾಕಿದ್ದ. ಆದರೆ ಸೋಮವಾರ ರಾತ್ರಿ ಮನೆಗೆ ಬಂದ ಆರೋಪಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದು ಮನೆಯಲ್ಲಿದ್ದವರ ಮೇಲೆ ಏಕಾಏಕಿ ಪ್ರಹಾರ ಮಾಡಿದ್ದಾನೆ. ನಾಲ್ವರ ಮೇಲೆ ಎರ್ರಾಬಿರ್ರಿಯಾಗಿ ದಾಳಿ ಮಾಡಿದ್ದಾನೆ. ಆತನ ಏಟಿಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಾಲ್ವರ ರಕ್ತ ಹರಿಯುತ್ತಿದ್ದರೂ ಸಮಾಧಾನವಾಗದ ಹಿನ್ನೆಲೆಯಲ್ಲಿ ತನ್ನ ತಾಯಿಯನ್ನೂ ಕೊಲೆ ಮಾಡಲು ಹೋಗಿದ್ದ. ಆದರೆ ಅವರು ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದಾಗ ಸುಮಾರು ಅರ್ಧ ಕಿಲೋಮೀಟರ್ ದೂರ ಓಡಿಹೋಗಿದ್ದಾನೆ.
ನಂತರ ಸ್ಥಳೀಯರು ಆಟೊ ಸಹಾಯ ಪಡೆದು ಆತನನ್ನು ಹಿಡಿದುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.