ಹಾವೇರಿ: ಮೀಸಲಾತಿ ಸಂಬಂಧ ನಾವು ನಿರ್ಧಾರ ಮಾಡಿದ್ದೇವೆ, ನಾವು ಕ್ರೆಡಿಟ್ ತೆಗೆದುಕೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಹಾವೇರಿಯಲ್ಲಿ ಇಂದು ಮಾತನಾಡಿದ ಅವರು, ಅಹಿಂದ ಚಳವಳಿ ಆರಂಭಿಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರವರು ಹಿಂದುಳಿದ ಸಮಾಜಗಳಿಗೆ ನ್ಯಾಯವನ್ನೇ ಕೊಡಲಿಲ್ಲ. ಆಗ ಅಹಿಂದಕ್ಕೆ ನ್ಯಾಯ ಕೊಡದ ಅವರು ಈಗ ನಾವು ಕೊಟ್ಟಾಗ ಅಸಮಾಧಾನ ತೋರಿಸುವುದು ಯಾವ ನ್ಯಾಯ? ಅವರ ಕಾಲಘಟ್ಟದಲ್ಲಿ ಕೊಡುವ ಯೋಗ್ಯತೆ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಒಂದು ಆಯೋಗ ರಚಿಸಿ ಏನೂ ತೀರ್ಮಾನ ಕೈಗೊಳ್ಳದ ಸಿದ್ದರಾಮಯ್ಯ, ವೀರಶೈವ- ಲಿಂಗಾಯತ ಸಮಾಜವನ್ನು ಒಡೆದು ಆಳಿದರು. ಅದು ಬಿಟ್ಟು ಏನು ಮಾಡಿದ್ದಾರೆ. ಅವರಿಗೆ ಎಲ್ಲಿ ನೈತಿಕತೆ ಇದೆ? ಎಂದು ಕಟೀಲ್ ಕೇಳಿದ್ದಾರೆ.
ಎರಡು ಸಮುದಾಯಗಳ ಬೇಡಿಕೆ ಅನ್ವಯ ಮೀಸಲಾತಿಯಲ್ಲಿ ಕೆಲ ಬದಲಾವಣೆ ಮಾಡಿ ಅವುಗಳನ್ನು ಈಡೇರಿಸಿದ್ದೇವೆ. ಈ ಸಂಬಂಧ ಇನ್ನೂ ಹತ್ತಾರು ಯೋಚನೆಗಳಿವೆ. ಅವುಗಳನ್ನು ಸರಕಾರ ಮಾಡಲಿದೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.