ಬಂಟ್ವಾಳ: ಕೆಲವು ದಿನಗಳಿಂದ ನಿರಂತರವಾಗಿ ಎಡೆ ಬಿಡದೆ ಸುರಿಯುವ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದಲೂ ನೀರಿನ ಹರಿವು ಹೆಚ್ಚಾಗುತ್ತಲೇ ಇದ್ದು, ಇಂದು ಬೆಳಿಗ್ಗೆ 8 ಮಿ.ಮಿ.ಎತ್ತರದಲ್ಲಿ ಅತ್ಯಂತ ವೇಗವಾಗಿ ಹರಿಯುತ್ತಿದೆ.
ನೀರಿನ ಅಪಾಯದ ಮಟ್ಟ 8.5 ಆಗಿದ್ದು, ಈಗಾಗಲೇ 8 ಮಿ.ಮಿ.ಎತ್ತರದಲ್ಲಿ ನೀರು ಹರಿಯುತ್ತಿದ್ದು, ನೆರೆ ಬರುವ ಬಹುತೇಕ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ನದಿ ತೀರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.
ನೀರು ಹೆಚ್ಚಾದಂತೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಾಣೆಮಂಗಳೂರು ಹಳೆ ಪೇಟೆಯಲ್ಲಿರುವ ಮಿಲಿಟರಿ ಗ್ರೌಂಡ್ ಗೆ ನೀರು ತುಂಬಿದೆ. ಪಾಣೆಮಂಗಳೂರು ಸೇತುವೆಯ ಅಡಿ ಭಾಗದ ಕಂಚಿಕಾರ ಪೇಟೆಯ ರಸ್ತೆಗೂ ನೀರು ಬಂದಿದೆ. ಆದರೆ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ.
ನೀರು ಹೆಚ್ಚಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡರೆ ಜನರು ಯಾವುದೇ ಗೊಂದಲಕ್ಕೆ ಎಡೆ ಮಾಡುವುದು ಬೇಡ. ಇಲಾಖೆ ಸಂಪೂರ್ಣ ಸಜ್ಜಾಗಿದ್ದು, ಬೋಟ್ ಹಾಗೂ ಇತರ ಸಕಲ ವ್ಯವಸ್ಥೆ ಗಳೊಂದಿಗೆ ಸಜ್ಜಾಗಿದೆ ಎಂದು ತಹಶೀಲ್ದಾರ್ ಸ್ಮಿತಾರಾಮು ತಿಳಿಸಿದ್ದಾರೆ. ತಗ್ಗು ಪ್ರದೇಶದ ಜನರು ನೀರಿಗೆ ಇಳಿಯಬಾರದು, ಹೆಚ್ಚಿನ ಜಾಗರೂಕತೆ ವಹಿಸಬೇಕು ಹಾಗೂ ಯಾವುದೇ ಸಂದರ್ಭದಲ್ಲಿಯೂ ಪೋಲಿಸ್ ಇಲಾಖೆ ಅಥವಾ ಕಂದಾಯ ಇಲಾಖೆಗೆ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.