ಮಂಗಳೂರು: ಬಿಜೆಪಿ ಎಂಎಲ್ಸಿ ಕೆ.ಪಿ. ನಂಜುಂಡಿ ಅವರನ್ನು ಕರೆದು ಬುದ್ದಿ ಹೇಳಿ ಎಂದು ವಿಶ್ವಕರ್ಮ ಸಮುದಾಯದ ಮುಖಂಡರ ನಿಯೋಗ ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಗೆ ಮನವಿ ಸಲ್ಲಿಸಿದೆ.
ನಂಜುಂಡಿಯವರ ಬೆಂಬಲಿಗರು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ವಿಶ್ವಕರ್ಮ ಸಮಾಜ ಒಡೆಯಲು ಸಂಚು ಎಂಬ ಹೇಳಿಕೆಗಳೂ ಸೇರಿದಂತೆ ಅನೇಕ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿರುವುದು ಕಂಡುಬಂದಿದೆ. ಈ ಚರ್ಚೆ ಮತ್ತು ವಿವಾದಗಳನ್ನು ಕೆ.ಪಿ. ನಂಜುಂಡಿಯವರ ಹೆಸರಿನಲ್ಲಿ ನಡೆಸುತ್ತಿರುವುದರಿಂದ ಶಾಸಕ ನಂಜುಂಡಿಯವರನ್ನು ಕರೆದು ಬುದ್ಧಿ ಹೇಳಬೇಕು. ಸಮಾಜ ಒಡೆಯುತ್ತಿರುವ ಕೆಲಸವನ್ನು ಬೇರಾರೂ ಮಾಡುತ್ತಿಲ್ಲ, ಸ್ವತಃ ನಂಜುಂಡಿಯವರೇ ಮಾಡುತ್ತಿದ್ದಾರೆ ಎಂದು ವಿಶ್ವಕರ್ಮ ಮುಖಂಡರ ನಿಯೋಗ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಒಂದು ಸಮಾಜ ಒಂದಾಗಿ ಮುಂದಡಿಯಿಡಬೇಕಾಗಿದ್ದು, ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬೇಕಾದ ದಿನಗಳಲ್ಲಿ ನಂಜುಂಡಿ ಬೆಂಬಲಿಗರು ಎನ್ನುವ ಕೆಲವರು ಮಾಡುವ ಅನಾಹುತಗಳಿಂದಾಗಿ ಸಮಾಜದ ಬಗ್ಗೆ ಕೆಟ್ಟ ಸಂದೇಶ ರವಾನೆ ಆಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಪಕ್ಷದ ಶಾಸಕರಿಗೆ ಈ ಕುರಿತು ಮಾರ್ಗದರ್ಶನ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನಿಯೋಗದಲ್ಲಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಲ ಮಧು ಆಚಾರ್ಯ ಮುಲ್ಕಿ, ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಕಾಳಿಕಾಂಬ ದೇವಸ್ಥಾನದ ಕೇಶವಾಚಾರ್ಯ ಮಂಗಳೂರು, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ತ್ರಾಸಿ ಸುಧಾಕರ್ ಆಚಾರ್ಯ, ವಸಂತ ಆಚಾರ್ಯ ಸುರತ್ಕಲ್ ಉಪಸ್ಥಿತರಿದ್ದರು.