ಕಾಪು: ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಪ್ರಧಾನಿ ಮೋದಿ ಬಗ್ಗೆ ಮಾತನಾಡಿ ಸಾಕಷ್ಟು ಸುದ್ದಿಯಾಗಿದ್ದಾರೆ. “ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ನಮ್ಮ ದೇಶದ ಪ್ರಧಾನಿ ಮೋದಿ ಮತ್ತು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅದ್ಯಾವ ಸಂದರ್ಭದಲ್ಲಿ ಅಪ್ಪಿಕೊಂಡರೋ, ಜಗತ್ತಿನಲ್ಲಿ ಮೊದಲ ಸ್ಥಾನ ಟ್ರಂಪ್ ಗೆ ಸಿಕ್ಕಿದ್ದರೆ ಎರಡನೆ ಸ್ಥಾನ ಮೋದಿ ನಿಂತಿದ್ದಾರೆ. ಬಹುಶಃ ಇದು ಕೋವಿಡ್ 19 ನ ಅಪ್ಪುಗೆ ಆಗಿರಬಹುದು” ಎಂದು ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮೋದಿಯ ಬಗ್ಗೆ ಹೇಳಿಕೆ ನೀಡಿದ್ದಾರೆ.

ಕೊರೊನಾ ಸೋಂಕನ್ನು ನಿಭಾಯಿಸುವಲ್ಲಿ ದೇಶ ಸೋತಿದೆ. ಪ್ರಧಾನಿಯವರು ಕೇವಲ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಜಾಗಟೆ ಬಡಿದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.ಈಗಾಗಲೇ 72 ದಿನ ಲಾಕ್ಡೌನ್ ಆರು ತಿಂಗಳಿಂದ ಕೊರೊನಾ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ 55 ಲಕ್ಷ ತಲುಪಿದೆ. ರೂ 2,000 ಕೋಟಿಯಷ್ಟು ವೈದ್ಯಕೀಯ ಉಪಕರಣಗಳ ಖರೀದಿಸುವುದರಲ್ಲಿ ಭ್ರಷ್ಟಾಚರ ನಡೆದಿದೆ ಎಂದರು.
ಸೋಂಕಿತನಿಗೆ ಮೂರು ಲಕ್ಷ ಸರಕಾರದಿಂದ ಅಸ್ಪತ್ರೆಗೆ ಸಿಗುತ್ತೆ. ಇದರಿಂದ ಜನರು ಭಯ ಆತಂಕದಿಂದ ಕೋವಿಡ್ ತಪಾಸಣೆಗೆ ಹೋಗುತ್ತಿಲ್ಲ. ಆರು ತಿಂಗಳಿನಿಂದ ಜನರಿಗೆ ಕೊರೊನಾ ಬಿಟ್ಟು ಬೇರೆ ಯಾವುದೇ ಕಾಯಿಲೆ ಬರಲಿಲ್ವಾ? ಸತ್ತವರೆಲ್ಲ ಕೊರೊನಾದಿಂದಲೇ ಸತ್ರಾ? ಎಂದು ಪ್ರಶ್ನಿಸಿದ ಅವರು ಕೊರೊನಾ ರುದ್ರನರ್ತನದ ನಡುವೆ ನಾವು ಜನರ ಸೇವೆಗೆ ನಿಂತಿದ್ದೇವೆ ಎಂದರು.