ಬೆಳ್ತಂಗಡಿ: ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಬೆಳ್ತಂಗಡಿ ಠಾಣೆಗೆ ದೂರು ನೀಡಿದೆ.
ಜೂನ್ 25ರಂದು ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ ಸಲೀಂ ಎಂಬವರು ಕಾಜೂರು ಮಸೀದಿಗೆ ಶಿಲಾನ್ಯಾಸಕ್ಕಾಗಿ ಸಚಿವರಾಗಿ ಇರಲಿ ಬಿಜೆಪಿಯ ನಾಯಕರಾಗಿ ಇರಲಿ ಸಂಘ ಪರಿವಾರದವರ ಇರಲಿ ಮಸೀದಿಯ ವಠಾರಕ್ಕೆ ಬರುವಾಗ ನೀವು ಬಹಳಷ್ಟು ಜಾಗೃತೆ ವಹಿಸಬೇಕು. ಯಾಕೆಂದರೆ ಕಾಜೂರಿನ ಮಸೀದಿ ಮತ್ತು ದರ್ಗಾ ವಠಾರದಲ್ಲಿ ಅನೇಕ ವರ್ಷದ ಹಿಂದಿನ ಕಬರ್ ಸ್ಥಾನದ ಕಲ್ಲುಗಳಿವೆ ಕಬರ್ ಸ್ಥಾನದಲ್ಲಿ ದಫನ ಮಾಡಿದ ನಂತರ 2 ಉರುಟಾದ ಕಲ್ಲುಗಳನ್ನು ತಲೆ ಭಾಗದಲ್ಲಿ ಮತ್ತು ಕಾಲಿನ ಭಾಗದಲ್ಲಿ ಇಡುತ್ತೇವೆ ಅವರು ಬಂದ ಸಂದರ್ಭದಲ್ಲಿ ಈ ಕಲ್ಲುಗಳನ್ನು ನೋಡಿ ಎಲ್ಲಿಯಾದರೂ ಶಿವಲಿಂಗ ಆಗಿರಬಹುದು ಎಂದು ಹೇಳಬಹುದು. ಹಾಗಾಗಿ ಕಮಿಟಿಯವರು ಎಚ್ಚರಿಕೆಯನ್ನು ವಹಿಸಬೇಕು ಎಂದಿದ್ದರು.
ಸಲೀಂ ಈ ರೀತಿ ನಮ್ಮ ಹಿಂದೂ ಸಮಾಜದ ನಂಬಿಕೆಗಳನ್ನು ಅತ್ಯಂತ ತುಚ್ಛೀಕರಿಸುವ ರೀತಿಯಲ್ಲಿ ಹಾಗೂ ಅವುಗಳನ್ನು ಹಾಸ್ಯಾಸ್ಪದ ರೀತಿಯಲ್ಲಿ ಹೇಳಿಕೆ ನೀಡುತ್ತಾರೆ. ಈ ರೀತಿ ಆತ ಹೇಳಿಕೆ ನೀಡುತ್ತಿರುವಾಗ ಪತ್ರಿಕಾಗೋಷ್ಠಿಯಲ್ಲಿ ಅವರು ನೀಡಿದ ಹೇಳಿಕೆ ಹಾಗೂ ಇತರ ಪ್ರಮುಖರು ಅಲ್ಲಿ ಕುಳಿತಿದ್ದು ಅವರ ಮಾತುಗಳಿಗೆ ಸಹಮತ ವ್ಯಕ್ತಪಡಿಸುತ್ತಿರುವ ಸಂದರ್ಭದ ವಿಡಿಯೋ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಪ್ರಸಾರವಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಈ ರೀತಿಯ ಅಸಂಬದ್ಧ ಅವಹೇಳನಕಾರಿ ಹಾಗೂ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುವ ವಿಧದ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ರೀತಿಯ ಧಕ್ಕೆಯನ್ನುಂಟು ಮಾಡಿದ್ದಾರೆ. ಅಲ್ಲದೇ ಹಿಂದೂಗಳಲ್ಲಿ ದೇವರ ಮೇಲಿರುವ ಭಕ್ತಿ, ಭಾವನೆಗಳನ್ನು ವಿಚಲಿತಗೊಳಿಸಿ ಸಮಾಜದಲ್ಲಿ ಕೋಮು ಗಲಭೆಯನ್ನು ಉಂಟು ಮಾಡುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ. ಕಾಜೂರು ಪರಿಸರದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದು ಅವರ ನಂಬಿಕೆಗೆ ಇದು ಘಾಸಿಯನ್ನುಂಟು ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ವಿ.ಹಿ.ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ,ವಿ.ಹಿ.ಪರಿತ್ ಬೆಳ್ತಂಗಡಿ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.