ಬಂಟ್ವಾಳ: ಇಲ್ಲಿನ ಮಣಿನಾಲ್ಕೂರು ಗ್ರಾಮದ ಅಗರಗಂಡಿ ಬಳಿಯ ಹಂಡೀರುವಿನಲ್ಲಿ ಒಂಟಿ ಮಹಿಳೆ ವಾಸವಿದ್ದ ಮನೆಯೊಂದರ ಹೊರಗಡೆ ತೊಳೆದು ಇಟ್ಟಿದ್ದ ಪಾತ್ರೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಅಗರಗಂಡಿ ನಿವಾಸಿ ಪ್ರವೀಣ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಆತನ ಸಹೋದರ ಸತೀಶ್ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳು ದೊಡ್ಡ ಹಂಡೆ, ಅಡುಗೆಯ 3 ಪಾತ್ರೆಗಳು ಹಾಗೂ 2 ಫೈಬರ್ ಕುರ್ಚಿಗಳು ಸೇರಿ ಒಟ್ಟು 3,500 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದರು.
ಹಂಡೀರು ನಿವಾಸಿ ಮುತ್ತು ಅವರ ಮನೆಯಿಂದ ಜೂ. 25ರಂದು ಕಳ್ಳತನ ನಡೆದಿದ್ದು, ಈ ಕುರಿತು ಮುತ್ತು ಅವರ ಅಳಿಯ ಅಗರಗಂಡಿ ನಿವಾಸಿ ಪದ್ಮನಾಭ ನಾಯ್ಕ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಸ್ಥಳೀಯರೇ ಹಿಡಿದಿರುವ ಕುರಿತು ವೀಡಿಯೋ ಕೂಡ ವೈರಲ್ ಆಗಿತ್ತು.
ಮತ್ತೋರ್ವ ಆರೋಪಿಯ ಪತ್ತೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಅವರ ನೇತೃತ್ವದಲ್ಲಿ ಗ್ರಾಮಾಂತರ ಪಿಎಸ್ಐ ಹರೀಶ್, ಅಪರಾಧ ವಿಭಾಗದ ಪಿಎಸ್ಐ ಸಂಜೀವ ಹಾಗೂ ಸಿಬಂದಿ ತಂಡ ತನಿಖೆ ನಡೆಸುತ್ತಿದೆ.