ಬಂಟ್ವಾಳ: ಮಾಣಿ ಗ್ರಾಮದ ಗ್ರಾಮ ದೈವಕ್ಕೆ ಸಂಬಂಧಪಟ್ಟಂತೆ 1001 ಗಣಗಳಿಗೆ “ವನಭೊಜನ ” ಕಾರ್ಯಕ್ರಮ ನಡೆಯಿತು. ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಮಾಣಿ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆಯ ಮೊದಲು ಮಾಣಿ ಗ್ರಾಮದ ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ಹಾಗೂ ಅರೆಬೆಟ್ಟುವಿನಲ್ಲಿ ಒಂದೇ ದಿನ ವನಭೊಜನ ಕಾರ್ಯಕ್ರಮ ನಡೆಯುತ್ತದೆ.
ಅರೆಬೆಟ್ಟು ಗುತ್ತುವಿನಲ್ಲಿ ವರ್ಷಂಪ್ರತಿಯಂತೆ ಜರಗುವ ಕಂಬಳಕೋರಿಯಂದು ಈ ಎರಡು ಗ್ರಾಮದ ವನಭೋಜನಕ್ಕೆ ದಿನ ನಿಗದಿಯಾಗುತ್ತದೆ. ಅ ಪ್ರಕಾರ ಒಂದೇ ದಿನ ಎರಡು ಕಡೆಗಳಲ್ಲೂ ವನಭೋಜನಕ್ಕೆ ಮೀಸಲಿರಿಸಿದ ಜಾಗದಲ್ಲಿ ಮಾಣಿಗುತ್ತು ಮತ್ತು ಅರೆಬೆಟ್ಟು ಗುತ್ತುವಿನ ಮುಖ್ಯಸ್ಥರ ಮುಂದಾಳತ್ವದಲ್ಲಿ ಗ್ರಾಮಸ್ಥರ ಕೂಡುವಿಕೆಯಲ್ಲಿ ಜರಗುತ್ತದೆ. ಆದರೆ ಈ ವರ್ಷ ಮಾತ್ರ ಅರೆಬೆಟ್ಟುವಿನಲ್ಲಿ ಮೊದಲೇ ವನಭೋಜನ ನಡೆದಿತ್ತು.
ಇಂದು ಮಾಣಿಯಲ್ಲಿ ಮಾತ್ರ ವನಭೋಜನ ನಡೆಯಿತು.
ವನಭೋಜನ ಎಂದರೆ ಏನು:
ದಿನನಿಗದಿಯಂತೆ ಗ್ರಾಮದ ಭಕ್ತರು ದೈವದ ಗಣಗಳಿಗೆ ಹರಕೆಯ ರೂಪದಲ್ಲಿ ಅಗೆಲು ಸೇವೆ ನೀಡುವುದು ಇದರ ಉದ್ದೇಶ. ಅ ದಿನದಂದು ಊರಿನ ಭಕ್ತರು ಹರಕೆಯ ರೂಪದಲ್ಲಿ ಕೋಳಿ, ಒಣ ಮೀನು, ಅಕ್ಕಿ, ತೆಂಗಿನಕಾಯಿ, ಹುರುಳಿ, ಇತ್ಯಾದಿಗಳನ್ನು ಹರಕೆಗೆಂದು ನೀಡುತ್ತಾರೆ. ಕಾಡಿನ ಮದ್ಯದಲ್ಲಿ ಭಕ್ತರು ಹರಕೆಯ ರೂಪದಲ್ಲಿ ನೀಡಿದ ವಸ್ತುಗಳನ್ನು ಅಲ್ಲೇ ತಯಾರಿಸಿ ಅಗೆಲು ರೂಪದಲ್ಲಿ ದೈವದ ಗಣಗಳಿಗೆ ಬಡಿಸಲಾಗುತ್ತದೆ. ಬಳಿಕ ಗ್ರಾಮಸ್ಥರು ಒಟ್ಟಿಗೆ ಪ್ರಸಾದದ ರೂಪದಲ್ಲಿ ಪಡೆದುಕೊಂಡು ಅಲ್ಲೇ ಕುಳಿತು ಊಟ ಮಾಡುತ್ತಾರೆ.