ಮಂಗಳೂರು: ಮಾರ್ಚ್ ೧೨, ೨೦೨೩ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆ ಮತ್ತು ನಾಗರಿಕರ ಜೀವನ ಮಟ್ಟ ಸುಧಾರಿಸುವ ಗುರಿಯೊಂದಿಗೆ ಶನಿವಾರ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ‘ವಿ ದ ಪೀಪಲ್’ ಎಂಬ ನಾಗರಿಕ ಸೇವಾ ಸಂಸ್ಥೆಗೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಭಾಗವಹಿಸಿದ ತಜ್ಞರು ಪ್ರಜಾಪ್ರಭುತ್ವ ವ್ಯವಸ್ಥೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ನಾಗರಿಕರ ಸಹಭಾಗಿತ್ವ ಅಗತ್ಯ. ಕುಂದು ಕೊರತೆ, ಅಹವಾಲುಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕಾಗುತ್ತದೆ. ಅದಕ್ಕಾಗಿ ನಾಗರಿಕ ಸೇವಾ ಸಂಸ್ಥೆಗಳು ಮಹತ್ವದ ಪಾತ್ರವಹಿಸಬೇಕೆಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ವೆಬ್ಸೈಟ್ ಚಾಲನೆಗೊಳಿಸಿ ಮಾತನಾಡಿದ ಹಿರಿಯ ಸಮಾಜ ಸೇವಕ, ನಿವೃತ್ತ ಅಧಿಕಾರಿ ಪದ್ಮನಾಭ ಉಳ್ಳಾಲ ಅವರು ಸಮಸ್ಯೆ, ಕುಂದುಕೊರತೆಗಳಾದಾಗ ಸಂಬಂಧಪಟ್ಟವರ ಗಮನಕ್ಕೆ ತರಬೇಕಾದ ಹೊಣೆಗಾರಿಕೆ ನಾಗರಿಕರಿಗೆ ಇರಬೇಕು. ಜನರ ಭಾಗವಹಿಸುವಿಕೆಯಿಂದ ಮಾತ್ರ ವ್ಯವಸ್ಥೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಸಿವಿಕ್ ಬೆಂಗಳೂರಿನ ಕಾತ್ಯಾಯನಿ ಚಾಮರಾಜ್ ಮಾತನಾಡಿ, ಪುರಸಭೆಗಳ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ತಪ್ಪು ನೀತಿ ಅನುಸರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾಗರಿಕ ಸಮಾಜ ಸಂಘಟನೆಗಳು ಜನರ ಬೇಡಿಕೆಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ತಿಳಿಸುವಂತೆ ಒತ್ತಾಯಿಸಿದರು.
‘‘ವಾರ್ಡ್ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ, ಏರಿಯಾ ಸಭೆಗಳನ್ನು ಇನ್ನೂ ರಚಿಸಿಲ್ಲ. ಗ್ರಾಮೀಣ ಪ್ರದೇಶದಂತೆ ನಗರ ಪ್ರದೇಶದಲ್ಲಿ ಸೋಶಿಯಲ್ ಆಡಿಟ್ ಆಗುತ್ತಿಲ್ಲ. ನಗರ ಪ್ರದೇಶದಲ್ಲಿ ನಾಗರಿಕ ಸಂಘಟನೆಗಳು ನಿರಂತರವಾಗಿ ಜನರ ಬೇಡಿಕೆಗಳ ಬಗ್ಗೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅರಿವು ಮೂಡಿಸಬೇಕು. ಜನಪರ ಕೆಲಸಕ್ಕಾಗಿ ಅಡ್ವಕೆಸಿ ಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು,” ಎಂದವರು ಹೇಳಿದರು.
ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡಿ. ಜೀವನ್ ಕುಮಾರ್ ಅವರು ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವೃದ್ಧಿಸಲು ಸಲಹೆ ನೀಡಿದರು. ಸೋಶಿಯಲ್ ಮೀಡಿಯಾದ ಅಪಾಯಗಳ ಬಗ್ಗೆ ಸ್ವತಂತ್ರ ಪತ್ರಕರ್ತೆ, ಲೇಖಕಿ ಮೆಲೆನಿ ಕುಮಾರ್ ಮಾತನಾಡಿದರು.
‘ವಿ ದ ಪೀಪಲ್’ ಸಂಸ್ಥೆಯ ಅಧ್ಯಕ್ಷ ಪ್ರತಾಪ್ಚಂದ್ರ ಕೆದಿಲಾಯ ಅವರು ಸಂಸ್ಥೆಯ ಧ್ಯೇಯ ಉದ್ದೇಶಗಳನ್ನು ವಿವರಿಸಿದರು. ಮುಂದಿನ ಹತ್ತು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರುವ ಸಾಮಾಜಿಕ ಕಾರ್ಯಕರ್ತರೊಂದಿಗೆ ಸಂಸ್ಥೆಯು ಚಿಂತನ ಮಂಥನ ಸಭೆಯನ್ನು ಕರೆಯಲಿದೆ ಎಂದು ಅವರು ಘೋಷಿಸಿದರು. ಈ ಸಭೆಯ ಉದ್ದೇಶವು ಪ್ರದೇಶದ ಮೇಲೆ ಪರಿಣಾಮ ಬೀರುವ ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದು, ಎಂದು ಹೇಳಿದರು.
ಉಪಾಧ್ಯಕ್ಷೆ ಮೇರಿಯೆಟ್ ಫರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಓಸ್ವಾಲ್ಡ್ ಪಿರೇರ ವಂದಿಸಿದರು. ಕೋಶಾಧಿಕಾರಿ ಸುರೇಶ್ ನಾಯಕ್ ಮತ್ತು ಕಾರ್ಯಕಾರಿ ಸದ್ಯಸ್ಯರಾದ ಭಾಸ್ಕರ್ ಕಿರಣ್, ದಿಲೀಪ್ ವಾಸ್ ನಾಯ್ಕ್, ಗ್ಲಾಡಿಸ್ ಮೊಂತೇರೊ, ಸ್ಟೀವನ್ ಡಿಸೋಜಾ ಭಾಗವಹಿಸಿದರು.