ಮಂಗಳೂರು: ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು, ಇದೀಗ ಕ್ವಾರಂಟೈನ್ಗೆ ಸಂಬಂಧಿಸಿ ಹೊಸ ಮಾರ್ಗಸೂಚಿ ಅನುಸರಿಸುವ ಮೂಲಕ ಮನೆಗಳಿಗೆ ಕೋವಿಡ್ ಹರಡುವ ಯೋಜನೆ ರೂಪಿಸಿದಂತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಕೋವಿಡ್ ಸೋಂಕಿನ ಆರಂಭದ ದಿನಗಳಲ್ಲಿ ಪ್ರತಿದಿನ ಸಭೆ ನಡೆಸುತ್ತಿದ್ದ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಈಗ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೊಸ ಮಾರ್ಗಸೂಚಿಯನ್ನು ಪುನರ್ ವಿಮರ್ಶೆ ಮಾಡುವಂತೆ ಆಗ್ರಹಿಸಿದ ಇವರು, ಸಂಪೂರ್ಣ ಲಾಕ್ಡೌನ್ ಇದ್ದ ಸಂದರ್ಭ ಹೊರ ರಾಜ್ಯ, ವಿದೇಶಗಳಿಂದ ಬರುವವರಿಗೆ ಆರಂಭದಲ್ಲಿ 28 ದಿನ ಮತ್ತೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. 2 ಬಾರಿ ತಪಾಸಣೆ ವ್ಯವಸ್ಥೆ ಇತ್ತು. ಆಗ ಕೋವಿಡ್ ಸೋಂಕು ಬೇಗ ಪತ್ತೆಯ ಜತೆಗೆ ಹರಡುವಿಕೆಯೂ ನಿಯಂತ್ರಣದಲ್ಲಿತ್ತು. ಹೊಸ ಮಾರ್ಗಸೂಚಿ ಪ್ರಕಾರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್, ಸೋಂಕಿನ ಗುಣ ಲಕ್ಷಣವಿದ್ದಲ್ಲಿ ಮಾತ್ರವೇ ತಪಾಸಣೆ. ಈ ಮಾರ್ಗಸೂಚಿ ಅನುಸರಿಸಿದರೆ ಸೋಂಕು ರಾಜ್ಯದಲ್ಲಿ ಗಂಭೀರ ಸ್ವರೂಪ ತಾಳಲಿದೆ ಎಂದು ಎಚ್ಚರಿಸಿದರು.