ಬೆಂಗಳೂರು: ಕರ್ನಾಟಕ ನಾಲ್ಕು ಸ್ಥಾನಗಳು ಸೇರಿ ವಿವಿಧ ರಾಜ್ಯಗಳ 18 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಮತದಾನ ನಡೆಯಲಿದೆ. ರಾಜ್ಯದ 4 ಸ್ಥಾನಗಳಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಮತ್ತು ಕಾಂಗ್ರೆಸ್ ನೆರವಿನಿಂದ ಜೆಡಿಎಸ್ 1 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.
ರಾಜ್ಯಸಭೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿರುವುದು ಬಿಜೆಪಿ ಹೈಕಮಾಂಡ್ ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಭಾಕರ ಕೋರೆ ಮತ್ತು ತೇಜಸ್ವಿನಿ ಅನಂತಕುಮಾರ್ ಅವರ ಹೆಸರು ಮುಂಚೂಣಿಯಲ್ಲಿವೆ. 2 ಸ್ಥಾನಕ್ಕೆ ಮೂವರು ಘಟಾನುಘಟಿಗಳ ಹೆಸರು ಮುಂಚೂಣಿಯಲ್ಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್, ತೇಜಸ್ವಿನಿ ಅನಂತಕುಮಾರ್, ಪ್ರಭಾಕರ್ ಕೋರೆ, ರಮೇಶ್ ಕತ್ತಿ ಅವರೊಂದಿಗೆ ಇನ್ನೂ ಹಲವರ ಹೆಸರು ಪರಿಗಣನೆಯಲ್ಲಿದ್ದು, ಪ್ರಭಾಕರ ಕೋರೆ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದರೆ ಇನ್ನೊಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ರಾಜಕೀಯ ಪುನರ್ ಪ್ರವೇಶಕ್ಕೆ ಇದೊಂದು ಅವಕಾಶ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಗೆ ಬೇಕಿದೆ ಕಾಂಗ್ರೆಸ್ ಅಭಯ
ಈ ಚುನಾವಣೆಯಲ್ಲಿ ಜೆಡಿಎಸ್ ಒಂದು ಸ್ಥಾನ ಗೆಲ್ಲುವಷ್ಟು ಸದಸ್ಯ ಬಲ ಇಲ್ಲವಾದ್ದರಿಂದ ಕಾಂಗ್ರೆಸ್ ತೀರ್ವನದ ಮೇಲೆ ಪಕ್ಷದ ಅಭ್ಯರ್ಥಿ ಭವಿಷ್ಯ ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಬಲ 34 ಇದ್ದು, ರಾಜ್ಯಸಭೆ ಚುನಾವಣೆಗೆ ಆಯ್ಕೆಯಾಬೇಕಾದರೆ 46 ಶಾಸಕರ ಬಲ ಅಗತ್ಯವಿದೆ. ಕಾಂಗ್ರೆಸ್ 68 ಶಾಸಕರ ಬಲವಿದ್ದು, 22 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಈ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಕೊಡುಕೊಳ್ಳುವಿಕೆ ಆಧಾರದ ಮೇಲೆ ಕೊಡಲು ಕಾಂಗ್ರೆಸ್ ವರಿಷ್ಠರು ಆಲೋಚಿಸಿದ್ದಾರೆ ಎನ್ನಲಾಗಿದೆ.