ಬಂಟ್ವಾಳ: ಯುವಕನೊಬ್ಬನಿಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಯುಧದಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಿನ್ನೆ ತಡರಾತ್ರಿ ಬಿಸಿ ರೋಡ್ ನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಬ್ರಹ್ಮರಕೂಟ್ಲು ಸಮೀಪದ ಉಮ್ಮಣ್ಣಗುಡ್ಡೆ ನಿವಾಸಿ ಮನೋಜ್(30) ಹಲ್ಲೆಗೊಳಗಾದ ಯುವಕ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮನೋಜ್, ಅಜ್ಜಿಬೆಟ್ಟು ಕ್ರಾಸ್ನ ಬಳಿ ಗಾಡಿ ನಿಲ್ಲಿಸಿ ಅಂಗಡಿ ಮುಂಭಾಗ ನಿಂತಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳಿಬ್ಬರು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.
ವಿದೇಶದಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಮನೋಜ್ ಎರಡು ವಾರ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಅವರಿಗೆ ಮದುವೆ ನಿಶ್ಚಯವಾಗಿದ್ದು, ಸದ್ಯದಲ್ಲೇ ವಿವಾಹ ನಿಗದಿಯಾಗಿತ್ತು.
ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಚೆಲುವರಾಜ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.