ಮಂಗಳೂರು: ಸೌದಿ ಅರೇಬಿಯಾದ ಕರೆನ್ಸಿ ಕೊಡುವುದಾಗಿ ಹೇಳಿ 4 ಲಕ್ಷ ರೂ. ಪಡೆದುಕೊಂಡು ಕಾಗದದ ತುಂಡುಗಳಿರುವ ಬಂಡಲ್ ನೀಡಿ ವಂಚಿಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್ನಲ್ಲಿ ನಡೆದಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್ನಲ್ಲಿರುವ ತಾಜ್ ಬುಕ್ಸ್ಟಾಲ್ಗೆ ಬಂದಿದ್ದ ಅಪರಿಚಿತ ವ್ಯಕ್ತಿಯು ತನ್ನ ಬಳಿ ಸೌದಿ ಅರೇಬಿಯಾದ ಕರೆನ್ಸಿ ಇದೆ ಎಂದಿದ್ದಾನೆ. ಅದನ್ನು ಕಡಿಮೆ ಬೆಲೆಗೆ ನಿಮಗೆ ಕೊಡುತ್ತೇನೆಂದು ವ್ಯಕ್ತಿಯೊಬ್ಬರಿಗೆ ಹೇಳಿದ್ದಾನೆ. ಅದರಂತೆ ಭಾನುವಾರ ಅಪರಿಚಿತ ವ್ಯಕ್ತಿಯು 4 ಲಕ್ಷ ರೂ. ರೆಡಿ ಮಾಡಿ ಮಂಗಳೂರಿಗೆ ತಂದು ಕರೆ ಮಾಡುವಂತೆ ತಿಳಿಸಿದ್ದಾನೆ. ಸೋಮವಾರ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾರೆ.
ಆಗ ಆತ ಸ್ಟೇಟ್ಬ್ಯಾಂಕ್ ಸಮೀಪದ ಸರ್ವೀಸ್ ಬಸ್ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕಾಯುವಂತೆ ತಿಳಿಸಿದ್ದಾನೆ. ಅದರಂತೆ ಬೆಳಗ್ಗೆ 11:40 ವೇಳೆಗೆ ಬಂದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಕಟ್ಟನ್ನು ನೀಡಿ 4 ಲಕ್ಷ ರೂ.ವನ್ನು ಪಡೆದು ತಕ್ಷಣ ಓಡಿ ಪರಾರಿಯಾಗಿದ್ದಾನೆ. ದೂರುದಾರರು ಕಟ್ಟನ್ನು ಬಿಚ್ಚಿಸಿ ನೋಡಿದಾಗ ಅದರಲ್ಲಿ ಪೇಪರ್ ಪೀಸ್ ಗಳಿರೋದು ಗೊತ್ತಾಗಿ ಮೋಸ ಹೋಗಿದ್ದು ಅರಿವಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.