ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದಲ್ಲಿ ಅಪರಾಧಿಯ ಮಾಹಿತಿ ಕೇಳಿದರೆ ದೇಶವೇ ಬೆಚ್ಚಿ ಬೀಳುವ ಮಾಹಿತಿ ಸಿಗುತ್ತಿದೆ,
ಭಾರತ ವಿರೋಧಿ ಗೋಡೆ ಬರಹ ಬರೆದಾಗ ಶಾರೀಕ್ ವಿರುದ್ಧ ತೀವ್ರ ತರಹದ ತನಿಖೆ ಆಗದ ಕಾರಣ ವಾಪಸ್ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ವಿಧಾನಸೌಧದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಶಾರೀಕ್ ನಲ್ವತ್ತರಿಂದ ಐವತ್ತು ಜನರಿಗೆ ಐಸಿಸ್ ತರಬೇತಿ ಮಾಡಿದ್ದು ಅವನೇ ಸ್ವತಃ ಐಸಿಎಸ್ ತರಬೇತಿ ಪಡೆದು ಬಂದಿದ್ದ ಎಂಬ ಮಾಹಿತಿ ಸಿಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೇ, ಬಾಂಬ್ ಅನ್ನು ಕದ್ರಿ ದೇವಸ್ಥಾನದಲ್ಲಿ ಸ್ಫೋಟಿಸಲು ಶಾರೀಕ್ ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿಸಿರುವ ಶೋಭಾ ಕರಂದ್ಲಾಜೆ, ಮಂಗಳೂರಿನ ಸುತ್ತಲಿನ ಹಲವಾರು ದೇವಾಲಯಗಳ ಮ್ಯಾಪ್ ಅವನ ಕೈಯಲ್ಲಿ ಸಿಕ್ಕಿದೆ. ಗುಂಪು ಸೇರಿ ಕರಾವಳಿಯಲ್ಲಿ ಕೋಮು ಗಲಭೆ ಸೃಷ್ಟಿ ಮಾಡಬೇಕು, ದೇವಸ್ಥಾನ ಸ್ಫೋಟ ಮಾಡಬೇಕು, ಹಲವು ನಾಯಕರಿಗೆ ತೊಂದರೆ ಮಾಡಬೇಕು ಎಂಬ ಮಾಹಿತಿ ಅವನಿಂದ ಸಿಗುತ್ತಿದೆ ಎಂದಿದ್ದಾರೆ.
ಜೊತೆಗೆ ಕರಾವಳಿಯಲ್ಲಿ ಸಿರಿಯಾದಿಂದ ಐಸಿಸ್ ತರಬೇತಿ ಪಡೆದು ಬಂದವರು ಮತ್ತು ಪಿಎಫ್ ಐ ಸಂಘಟನೆಯಲ್ಲಿ ಸಕ್ರೀಯರಾಗಿ ಇದ್ದಂತಹವರು ಚಟುವಟಿಕೆ ಮಾಡುತ್ತಿದ್ದಾರೆ ಎಂದೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.