ಮಂಗಳೂರು; ಭೂಗತ ಪಾತಕಿ ಕಲಿ ಯೋಗೀಶ್ ಪ್ರಕರಣದಲ್ಲಿ ಭಾಗಿಯಾಗಿ ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಕಲಿ ಯೋಗೀಶ್ ನ ಸಹಚರ ಮುಲ್ಕಿಯ ಶ್ರೀನಿವಾಸ್ ಶೆಟ್ಟಿ @ಶೀನು(45) ಎಂಬಾತನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೋಕಾ ಪ್ರಕರಣದ ಅರೋಪಿಯಾದ ಭೂಗತ ಪಾತಕಿ ಕಲಿ ಯೋಗೀಶ್ ನ ಸಹಚರನಾದ ಆರೋಪಿ ಶ್ರೀನಿವಾಸ್ @ ಶೀನು, ಎಂಬಾತನು ಕಳೆದ 8 ವರ್ಷಗಳಿಂದ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ವಿರುದ್ದ ಪ್ರಿನ್ಸಿಪಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೈಸೂರು ರವರು ವಾರೆಂಟ್ ಹಾಗೂ ಉದ್ಘೋಷಣೆಯನ್ನು ಹೊರಡಿಸಿದ್ದರು. ಅದರಂತೆ ಈತನ ಪತ್ತೆಯ ಬಗ್ಗೆ ಶ್ರೀ ಶ್ರೀಕಾಂತ್ ,ಸಹಾಯಕ ಪೊಲೀಸ್ ಅಯುಕ್ತರು , ಮಂಗಳೂರು ಉತ್ತರ ಉಪ ವಿಭಾಗ, ಪಣಂಬೂರು ರವರ ಮಾರ್ಗದರ್ಶನದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜುನಾಥ ಬಿ ಎಸ್, ಪೊಲೀಸ್ ಉಪ ನಿರೀಕ್ಷಕರಾದ ಉಮೇಶ್ ಕುಮಾರ್. M. N ರವರ ನೇತೃತ್ವದಲ್ಲಿ ಸಿಬ್ಬಂದಿಯಾದ ಎ.ಎಸ್.ಐ ಸುರೇಶ್ ಕುಂದರ್, ಹೆಡ್ ಕಾನ್ಸ್ಟೇಬಲ್ ಉದಯ ರವರ ಒಂದು ತಂಡವನ್ನು ರಚಿಸಿ ಆತನ ಪತ್ತೆಯ ಬಗ್ಗೆ ಶ್ರಮಿಸಲಾಗಿ ಆತನು ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನು ಮುಂಬಯಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಅಸಾಮಿಯನ್ನು ದಸ್ತಗಿರಿ ಮಾಡಿ ದಿನಾಂಕ: 04-10-2025 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


