ಉಡುಪಿ: ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬ್ರಹ್ಮಾವರದ ನವ್ಯಾ ಎಂಬಾಕೆ ಸುಕೇಶ್ ಎಂಬಾತನ್ನು ಎ. 24ರಂದು ಕೋಟೇಶ್ವರದಲ್ಲಿ ವಿವಾಹವಾಗಿದ್ದರು. ಮದುವೆಗೆ ಮುನ್ನ ವರ ಸಹಿತ ಪರಮೇಶ್ವರ ಆಚಾರ್ಯ, ಸುಶೀಲಾ, ಸಂದೇಶ, ಮಾಲತಿ, ಪ್ರಮೋದ್ ಆವರು ಮದುವೆಯ ಮಾತುಕತೆ ಮಾಡಲು ಸೌರಿಬೈಲಿನಲ್ಲಿರುವ ನವ್ಯಾ ಅವರ ಮನೆಗೆ ಬಂದಿದ್ದರು. ಈ ವೇಳೆ 40 ಪವನ್ ಚಿನ್ನಾಭರಣ ಹಾಗೂ 50 ಲ.ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ನವ್ಯಾ ಅವರ ತಂದೆ ವರದಕ್ಷಿಣೆ ನೀಡಲು ನಿರಾಕರಿಸಿದಾಗ ಆರೋಪಿಗಳು ವರದಕ್ಷಿಣೆ ನೀಡದಿದ್ದರೆ ಮದುವೆಯ ಪ್ರಸ್ತಾವ ಮುರಿಯುವುದಾಗಿ ಹೆದರಿಸಿದ್ದರು.ಆರೋಪಿಗಳ ಒತ್ತಡಕ್ಕೆ ಒಳಗಾದ ಅವರು, 20 ಪವನ್ ಚಿನ್ನಾಭರಣ ಹಾಗೂ 20 ಲ.ರೂ. ನಗದು ವರದಕ್ಷಿಣೆ ನೀಡಲು ಒಪ್ಪಿ 20 ಲ.ರೂ.ಗಳನ್ನು ಮದುವೆಯ ಮುನ್ನ ವರನ ಬಳಿ ನೀಡಿದ್ದರು.
ಆದರೆ ಮದುವೆಯ ಅನಂತರ ಆರೋಪಿಗಳೆಲ್ಲಾ ಇನ್ನೂ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟು, ನವ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ಮದುವೆಯಾಗಿ 20 ದಿನದಲ್ಲಿ ವರ ವಿದೇಶಕ್ಕೆ ಹೋಗಿದ್ದು, ವಿದೇಶಕ್ಕೆ ಹೋದ 1 ವಾರ ಮಾತ್ರ ನವ್ಯಾ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ. ಅನಂತರ ಮಾತುಕತೆ ನಿಲ್ಲಿಸಿದ್ದಾನೆ ಎನ್ನಲಾಗಿದೆ.ಪ್ರಸ್ತುತ ಉಳಿದ ಆರೋಪಿಗಳು ವಿಚ್ಛೇದನ ನೀಡುವಂತೆ ಮಾಡುತ್ತೇವೆ ಎಂದು ಹೇಳಿ ನವ್ಯಾ ಅವರನ್ನು ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ದೂರಲಾಗಿದೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.