ಉಡುಪಿ: ಸ್ಕೂಟಿ ಸವಾರನಿಗೆ ಗೂಡ್ಸ್ ಆಟೋ ಡಿಕ್ಕಿಯಾಗಿ ಸ್ಕೂಟಿ ಸವಾರ ಸಾವನ್ನಪ್ಪಿರುವ ಘಟನೆ ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಗ್ರಾಮದಲ್ಲಿ ನಡೆದಿದೆ. ರಮೇಶ್ ಕಲ್ಕುರ ಮೃತ ಸವಾರ.
ಮಾರ್ಚ್ 9, 2026 ರಂದು ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ರಮೇಶ್ ಕಲ್ಕುರ ಅವರು ತಮ್ಮ ಸ್ಕೂಟಿಯಲ್ಲಿ ಕೋಟ್ನಕಟ್ಟೆ ಕಡೆಯಿಂದ ಹಿರಿಯಡ್ಕ ಕಡೆಗೆ ಬರುತ್ತಿದ್ದರು. ಈ ವೇಳೆ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ ಕಾಮತ್ ನರ್ಸಿಂಗ್ ಹೋಂ ಸಮೀಪ ತಲುಪುವಾಗ, ಎದುರುಗಡೆಯಿಂದ ಅಂದರೆ ಹಿರಿಯಡ್ಕದಿಂದ ಕೋಟ್ನಕಟ್ಟೆ ಕಡೆಗೆ ಬರುತ್ತಿದ್ದ ಗೂಡ್ಸ್ ಆಟೋ ರಿಕ್ಷಾವನ್ನು ಅದರ ಚಾಲಕ ಚಂದ್ರಶೇಖರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ಪರಿಣಾಮ ಸ್ಕೂಟಿ ಸವಾರ ರಮೇಶ್ ಕಲ್ಕುರ ಅವರು ವಾಹನ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವ್ರ ರಕ್ತಗಾಯಗೊಂಡಿದ್ದು, ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಬಳಿಕ ಅವರನ್ನು ತಕ್ಷಣವೇ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಬೆಳಿಗ್ಗೆ ಸುಮಾರು 6:10 ಗಂಟೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


