ಉಡುಪಿ: ಮಣಿಪಾಲ- ಉಡುಪಿ ರಸ್ತೆಯಲ್ಲಿ ಅಕ್ಟೋಬರ್ 9ರಂದು ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಎಂಐಟಿ ವಿದ್ಯಾರ್ಥಿ ವೆಮುಲಾ ಸುದರ್ಶನ್ ಚೌಧರಿ(19) ಅಂಗಾಂಗ ದಾನದ ಮೂಲಕ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಆಂಧ್ರಪ್ರದೇಶ ಮೂಲದ ವೆಮುಲ ಅಲೇಖಾ ಪ್ರಸಾದ್ ಅವರ ಪುತ್ರನಾದ ವೆಮುಲಾ ಸುದರ್ಶನ್ ಚೌಧರಿ ಅವರು ಅಕ್ಟೋಬರ್ 9ರಂದು ರಾತ್ರಿ 8:40ರ ವೇಳೆಗೆ ಅಪಘಾತಕ್ಕೀಡಾಗಿದ್ದರು. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದ ಬಳಿಕವೂ ಸುದರ್ಶನ್ ಚೌಧರಿ ಅವರನ್ನು ರಕ್ಷಿಸಲು ಸಾಧ್ಯವಾಗದೇ ಇದ್ದಾಗ ಸುದರ್ಶನ್ ಅವರ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.
ಕುಟುಂಬಸ್ಥರ ನಿರ್ಧಾರದಂತೆ ವಿವಿಧ ಆಸ್ಪತ್ರೆಗಳಲ್ಲಿ ನೋಂದಾಯಿತ ರೋಗಿಗಳಿಗೆ ಯಕೃತ್ತು, ಶ್ವಾಸಕೋಶ, ಮೂತ್ರಪಿಂಡ, ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳು ಮತ್ತು ಚರ್ಮ ದಾನ ಮಾಡುವ ಮೂಲಕ ಸುದರ್ಶನ್ ಅವರು ಹಲವು ರೋಗಿಗಳ ಬಾಳಿಗೆ ಬೆಳಕಾಗಿದ್ದಾರೆ.
ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಮತ್ತು ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ವರ್ಗಾಯಿಸಲಾಯಿತು.