ಉಡುಪಿ: ಪತ್ನಿಯ ರೀಲ್ಸ್ ಹುಚ್ಚಿಗೆ ಬೇಸತ್ತು ಆಕೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಕಿರಣ್ ಉಪಾಧ್ಯಾಯ(44)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಮೃತ ಮಹಿಳೆ ಜಯಶ್ರೀ ಬೀದರ್ ಮೂಲದವರಾಗಿದ್ದು ಅವರ ಅಂತ್ಯಸಂಸ್ಕಾರವನ್ನು ಉಡುಪಿಯಲ್ಲಿಯೇ ಭಾನುವಾರ ಕುಟುಂಬಸ್ಥರು ನೆರವೇರಿಸಿದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವ ಪರೀಕ್ಷಾ ಕೇಂದ್ರದಲ್ಲಿ ಶವ ಮಹಜರು, ಮರಣೋತ್ತರ ಪರೀಕ್ಷೆ, ವಿಚಾರಣೆ, ಮೊದಲಾದ ಕಾನೂನು ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಪೊಲೀಸರು, ಮೃತದೇಹವನ್ನು ಬೀದರಿನಿಂದ ಆಗಮಿಸಿದ ಆಕೆಯ ಕುಟುಂಬದವರಿಗೆ ಒಪ್ಪಿಸಿದ್ದರು.
ಮೃತದೇಹವನ್ನು ದೂರದ ಬೀದರಿಗೆ ಕೊಂಡೊಯ್ಯಲು ಅಸಹಾಯಕ ಸ್ಥಿತಿ ಮೃತರ ಸಂಬಂಧಿಕರಿಗೆ ಎದುರಾಯಿತು. ಪ್ರಕರಣದ ತನಿಖಾಧಿಕಾರಿ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ಅವರ ಸಲಹೆ ಸ್ವೀಕರಿಸಿದ ಮೃತಳ ಕುಟುಂಬಸ್ಥರು ಉಡುಪಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದರು. ಅದರಂತೆ ಉಡುಪಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಇಂದ್ರಾಳಿಯ ಹಿಂದೂ ರೂದ್ರಭೂಮಿ ಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.ಈ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ನೆರವಾದರು.