ಉಡುಪಿ : ರಾಜ್ಯದಲ್ಲೇ ಮೊದಲ ಬಾರಿಗೆ ಮಲ್ಪೆಯ ಬೀಚ್ ನಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ ಉದ್ಘಾಟನೆಗೊಂಡು ವಾರದ ಒಳಗೆ ಕಡಲಿನ ಅಬ್ಬರಕ್ಕೆ ಹಾನಿಗೊಂಡಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಸೇತುವೆಯ ಲಾಕ್ ತೆಗೆಯುವ ವೇಳೆ ಸೇತುವೆಯ ಭಾಗಗಳು ಕಳಚಿಕೊಂಡಿವೆ ಎನ್ನಲಾಗಿದೆ.
ಕಳೆದ ಶುಕ್ರವಾರವಷ್ಟೇ ಉದ್ಘಾಟನೆಗೊಂಡಿರುವ ನೂತನ ಅಲೆಗಳಲ್ಲಿ ತೇಲುವ ಸೇತುವೆಯನ್ನು ನೋಡಲು ಮತ್ತು ಅನುಭವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರೂ ಅವಕಾಶ ನೀಡಿರಲಿಲ್ಲ. ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸುರಕ್ಷೆಯ ದೃಷ್ಟಿಯಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಸ್ವಯಂಸೇವಕರು ಕಟ್ಟೆಚ್ಚರ ವಹಿಸಿದ್ದರು. ಇಲ್ಲಿನ ಜೀವ ರಕ್ಷಕ ತಂಡ ಎಲ್ಲರ ಮೇಲೂ ನಿಗಾ ಇರಿಸಿ, ನೀರಿಗಿಳಿಯಲು ನಿಷೇಧ ಹೇರಿತ್ತು.
ಇನ್ನು ಏಕಾಏಕಿ ಸಮುದ್ರದ ಅಬ್ಬರ ಕಾಣಿಸಿಕೊಂಡ ಕಾರಣ ಸೇತುವೆಯನ್ನು ಕಳಚಲು ಸಾಧ್ಯವಾಗಲಿಲ್ಲ.ತೇಲುವ ಸೇತುವೆ ಮತ್ತೆ ಸುರಕ್ಷಿತವಾಗಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿದು ಬಂದಿದೆ. ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಮತ್ತೆ ಕಾರ್ಯಾರಂಭ ಮಾಡಲಿದೆ. ಸುರಕ್ಷತೆ ಮತ್ತು ಲೈಫ್ ಜಾಕೆಟ್ ಧರಿಸಿದ ಬಳಿಕವೇ ಸೇತುವೆಯಲ್ಲಿ ನಡೆಯಲು ಅವಕಾಶ ನೀಡಲಾಗುತ್ತದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಹೇಳಿದ್ದಾರೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹ ಕಾರದಲ್ಲಿ ರಾಜ್ಯದಲ್ಲೇ ಪ್ರಥಮ ಎಂಬಂತೆ ಮಲ್ಪೆ ಬೀಚ್ನಲ್ಲಿ ತೇಲುವ ಸೇತುವೆ ನಿರ್ಮಾಣವಾಗಿತ್ತು. ರಾಜ್ಯದಲ್ಲೇ ಮೊದಲ ತೇಲುವ ಸೇತುವೆಯ ಅನುಭವ ಪಡೆದು ಉಡುಪಿಯ ಜನತೆ ಖುಷಿ ಪಟ್ಟಿದ್ದಾರೆ. 80 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆಯನ್ನು ಆಮದು ಮಾಡಿಕೊಳ್ಳಲಾಗಿದೆ.