ಉಡುಪಿ: ತುಳುನಾಡಿನ ದೈವಾರಾಧನೆಯಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ಕಡ್ಸಲೆಯನ್ನು ದೈವಪಾತ್ರಿಗಳು ಮತ್ತು ದೈವದ ಸೇವೆ ಮಾಡುವವರು ಬಿಟ್ಟರೆ ಬೇರೆ ಯಾರು ಈ ಆಯುಧವನ್ನು ಹಿಡಿಯುವಂತಿಲ್ಲ. ಆದರೆ ಈ ಪವಿತ್ರ ನಂಬಿಕೆಯನ್ನು ಗಾಳಿಗೆ ತೂರಿರುವ ಉಡುಪಿ ಸ್ಥಳೀಯ ಕಾಂಗ್ರೆಸ್ ನಾಯಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಉಡುಪಿ ಪ್ರವಾಸದ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ದೈವಗಳ ಬೆಳ್ಳಿಯ ಕಡ್ಸಲೆಯನ್ನು ಉಡುಗೊರೆಯಾಗಿ ನೀಡುವ ನೆಪದಲ್ಲಿ ದೊಡ್ಡ ಪ್ರಮಾದವನ್ನೇ ಎಸಗಿದ್ದಾರೆ. ಈ ಘಟನೆಯ ಕುರಿತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ತುಳುನಾಡಿದ ದೈವಾರಧನೆಯನ್ನು ರಾಜಕೀಯಕ್ಕೆ ಬಳಸಿರುವ ಕಾಂಗ್ರೆಸ್ ತುಳುನಾಡಿನ ಸಮಸ್ತರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ದೈವದ ಕಡ್ಸಲೆ ನೀಡಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯಿಂದ ದೈವಾರಾಧಕ ರ ಭಾವನೆಗೆ ಧಕ್ಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಾಸಕ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದು ತುಳುನಾಡಿನ ದೈವಾರಾಧನಾ ಪದ್ಧತಿಗೆ ಕಾಂಗ್ರೆಸ್ ನಿಂದ ಅವಮಾನ. ದೈವದ ಕಡ್ಸಲೆ ಗೆ ತನ್ನದೇ ಶಕ್ತಿ ಹಾಗೂ ನಂಬಿಕೆಯಿದೆ. ಇದನ್ನು ರಾಜಕೀಯಕ್ಕೆ ಬಳಸಿರುವುದು ಅಕ್ಷಮ್ಯ ಅಪರಾಧ. ತುಳುನಾಡಿನ ಸಮಸ್ತರಲ್ಲಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು. ಎಂದು ಆಗ್ರಹಿಸಿದ್ದಾರೆ.