ಉಡುಪಿ: ಪ್ರೀತಿಸುತ್ತಿದ್ದ ಹುಡುಗಿ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗಲೇ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಕುಂಜಿಬೆಟ್ಟುವಿನಲ್ಲಿ ನಡೆದಿದೆ. ಕುಂಜಿಬೆಟ್ಟು ನಿವಾಸಿ ರಾಜು ಅವರ ಪುತ್ರ ರಂಜಿತ್ (28) ಮೃತ ಯುವಕ.
ಜ.29ರಂದು ರಂಜಿತ್ ಅವರು ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾಡಿದ್ದರು.ಅನಂತರ ತಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೀತಿ ಎಂಬವರ ಜತೆ ಫೋನಿನಲ್ಲಿ ಮಾತನಾಡುತ್ತಾ ತನ್ನ ರೂಮಿನೊಳಗೆ ಹೋಗಿದ್ದನು. ರಾತ್ರಿ ವೇಳೆ ಮನೆಯ ವಾಟರ್ ಟ್ಯಾಂಕಿನ ನೀರು ತುಂಬಿ ಕೆಳಗೆ ಬೀಳುತ್ತಿದ್ದುದರಿಂದ ಅವರ ತಂದೆ ವಾಟರ್ ಟ್ಯಾಂಕಿನ ವಾಲ್ ನ್ನು ಆಫ್ ಮಾಡಲು ಹೋಗುವಾಗ ರಂಜಿತ್ ಅವರ ರೂಮಿನ ಕಿಟಕಿ ತೆರೆದು ನೋಡಿದ್ದಾರೆ.
ಈ ವೇಳೆ ಆತ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಆತನನ್ನು ಕೆಳಗೆ ಇಳಿಸಿ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಚಿಕಿತ್ಸೆ ನೀಡಿದರೂ ಕೂಡ ಆತ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.
ಈ ಸಾವಿನಲ್ಲಿ ಸಂಶಯವಿರುವುದಾಗಿ ಆತನ ಅಣ್ಣ ರಕ್ಷಿತ್ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


