
ಬೆಂಗಳೂರು: ಪ್ಯಾಲಸ್ಟೈನ್ ಸಿನಿಮಾಗಳಿಗೆ ರಾಜ್ಯದಲ್ಲಿ ಅವಕಾಶ ಮಾಡಿಕೊಡಬಾರದು ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ರಾಜ್ಯದಲ್ಲಿ ಪ್ಯಾಲೆಸ್ಟೈನ್ ಸಿನಿಮಾಗಳಿಗೆ ಅವಕಾಶ ಕೊಡಬೇಕೆಂಬ ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಭರತ್ ಶೆಟ್ಟಿ, ಪ್ಯಾಲೆಸ್ಟೈನ್ ಸಿನಿಮಾಗಳ ಹಿಂದೆ ಒಂದು ಹಿಡನ್ ಅಜೆಂಡಾ ಇರುತ್ತದೆ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಅಜೆಂಡಾ ಸಿನಿಮಾಗಳಲ್ಲಿ ಇರುವುದನ್ನು ನಾವು ನೋಡಿದ್ದೇವೆ, ಹಾಗಾಗಿ ಕರ್ನಾಟಕದಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ.
ಪ್ರಕಾಶ್ ರಾಜ್ ಅವರ ಮನಸ್ಥಿತಿ ನಮಗೆಲ್ಲರಿಗೂ ಗೊತ್ತಿರುವಂತಹದ್ದು, ಹಿಂದೂ ವಿರೋಧಿ, ದೇಶದ ಪರಿಕಲ್ಪನೆಗೆ ವಿರುದ್ಧವಾದ ಮನಸ್ಥಿತಿ ಇರುವಂತಹ ವ್ಯಕ್ತಿ
ವೇದಿಕೆಯಲ್ಲಿ ಸಿಎಂ ಜೊತೆ ಮಾತಾಡುವುದಕ್ಕೆ ಒಂದು ಅವಕಾಶ ಸಿಕ್ಕಿದೆ ಅಂತಾ ಹೇಳಿ ಪ್ಯಾಲೆಸ್ಟೈನ್ ಸಿನಿಮಾಗಳನ್ನು ತೋರಿಸಬೇಕು ಅಂತ ಹೇಳಿದ್ದಾರೆ, ಪ್ರಕಾಶ್ ರಾಜ್ ಅವರದ್ದೇ ಒಂದು ಹಿಡನ್ ಅಜೆಂಡಾ ಇರುತ್ತದೆ ಎಂದು ಭರತ್ ಶೆಟ್ಟಿ ಟೀಕಿಸಿದ್ದಾರೆ.ಕರ್ನಾಟಕದಲ್ಲಿ ಈ ರೀತಿಯ ಸಿನಿಮಾಗಳಿಗೆ ನಾವು ಖಂಡಿತ ಅವಕಾಶ ಮಾಡಿಕೊಡಬಾರದು ಎಂದೂ ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ನಿನ್ನೆ ವಿಧಾನಸೌಧದಲ್ಲಿ ನಡೆದಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್ ಪ್ಯಾಲೆಸ್ಟೈನ್ ಸಿನಿಮಾಗಳಿಗೆ ಕೇಂದ್ರ ಸರ್ಕಾರ ತಡೆ ಹಾಕಿರುವುದರ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತಬೇಕು ಎಂದು ಹೇಳಿದ್ದರು.


