ಮುರುಡೇಶ್ವರ: ಶಿವಮೊಗ್ಗ ಜಿಲ್ಲೆಯ ನಾಲ್ವರು ಪ್ರವಾಸಿಗರಲ್ಲಿ, ಇಬ್ಬರು ಸಮುದ್ರ ಪಾಲಾದ ಘಟನೆ ಮುರುಡೇಶ್ವರದಲ್ಲಿ ನಡೆದಿದೆ. ಒಬ್ಬನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ಮುಂದುವರೆದಿದೆ.
ಈಜಲು ಸಮುದ್ರಕ್ಕೆ ಇಳಿದಿದ್ದ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಾಸೂರು ನಿವಾಸಿಗಳಾದ ಮಣಿ ಹಾಗೂ ನಾಗರಾಜ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಹೋದ ದುರ್ದೈವಿಗಳು. ಮಣಿಯ ಮೃತದೇಹ ದಡಕ್ಕೆ ತೇಲಿಕೊಂಡು ಬಂದಿದೆ.
ಭಟ್ಕಳದಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಸೆಳೆತ ಜೋರಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಕಾರಣ ದೇವಸ್ಥಾನದ ಬಲಭಾಗದಲ್ಲಿ ಸಮುದ್ರಕ್ಕೆ ಪ್ರವಾಸಿಗರು ತೆರಳುವುದನ್ನು ಪ್ರವಾಸೋದ್ಯಮ ಇಲಾಖೆ ನಿಷೇಧಿಸಿದೆ. ಆದರೆ, ಪ್ರವಾಸಿಗರು ದೇವಸ್ಥಾನದ ಎಡಭಾಗದಲ್ಲಿ ಕದ್ದುಮುಚ್ಚಿ ಈಜಲು ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೇಕರಿ ಮಂಜುನಾಥ ಹಾಗೂ ಪ್ರವೀಣ ಎಂಬುವವರು ಬಂಡೆ ಹಿಡಿದುಕೊಂಡು ಬಚಾವಾಗಿದ್ದು, ಮಣಿ ಮತ್ತು ನಾಗರಾಜ ಅವರಿಗೆ ನೀರಿನ ಸೆಳೆತಕ್ಕೆ ಈಜಲು ಸಾಧ್ಯವಾಗಲಿಲ್ಲ. ಸದ್ಯ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರುಡೇಶ್ವರ: ಸಮುದ್ರದಲ್ಲಿ ಇಬ್ಬರು ಪ್ರವಾಸಿಗರು ನೀರು ಪಾಲು!
- Advertisement -
- Advertisement -
- Advertisement -