ಕಾರವಾರ: ಎರಡು ಕಾಡಾನೆಗಳು ಗುದ್ದಾಡಿ ಅವುಗಳಲ್ಲಿ ಒಂದು ಆನೆಯ ಕೊಂಬಿನ ಇರಿತಕ್ಕೆ ಗಂಭೀರ ಗಾಯಗೊಂಡ ಮತ್ತೊಂದು ಆನೆ ಮೃತಪಟ್ಟ ಘಟನೆ ದಾಂಡೇಲಿ ತಾಲೂಕಿನ ಕುಳಗಿ ವಲಯ ಅರಣ್ಯ ವ್ಯಾಪ್ತಿಯ ಕೇಗದಾಳ ಅರಣ್ಯದಲ್ಲಿ ನಡೆದಿದೆ.
ಇಲ್ಲಿಯ ಅರಣ್ಯದಲ್ಲಿದ್ದ ಎರಡು ಗಂಡಾನೆಗಳು ತಮ್ಮ ತಮ್ಮೊಳಗೆ ಕಾದಾಟ ನಡೆಸಿವೆ. ಈ ಸಂದರ್ಭದಲ್ಲಿ ಒಂದು ಆನೆ ತನ್ನ ದಂತದಿಂದ ಎದುರಾಳಿ ಆನೆಯ ಹೊಟ್ಟೆ, ಸೊಂಡಿಲು, ಕೊರಳಿನ ಭಾಗದಲ್ಲಿ ಬಲವಾಗಿ ತಿವಿದಿದೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಈ ಆನೆ ಅದೇ ಅರಣ್ಯಕ್ಕೆ ಹೊಂದಿಕೊಂಡಿರುವ ಬೊಮ್ನಳ್ಳಿ ಹತ್ತಿರದ ಹಳ್ಳದಲ್ಲಿ ಬಿದ್ದಿತ್ತು. ವಿಷಯ ತಿಳಿದ ಅರಣ್ಯ ಇಲಾಖೆಯವರು ತಕ್ಷಣ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮರುದಿನ ಆನೆ ಕೊನೆಯುಸಿರೆಳೆದಿದೆ.
ಜೋಯಿಡಾ ತಾಲ್ಲೂಕಿನ ಪಶು ವೈದ್ಯಾಧಿಕಾರಿ ಪ್ರದೀಪ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮೃತ ಆನೆಯ ಶವ ಸಂಸ್ಕಾರ ನೆರವೇರಿಸಲಾಗಿದೆ.
ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ, ನಗೆಯ ವಲಯಾರಣ್ಯಧಿಕಾರಿ ಅಭಿಷೇಕ್ ನಾಯ್ಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.