ಬೆಳ್ತಂಗಡಿ : ಭಾನುವಾರ ಸಂಜೆ ಲಾಯಿಲ ಗ್ರಾಮದ ದರ್ಪಿಂಜ ಸೇತುವೆ ಬಳಿ ಯುವಕನ ಸ್ಕೂಟರ್ ತಡೆದು ನಿಲ್ಲಿಸಿ ಹಲ್ಲೆ ಮಾಡಿ ವಾಹನದಲ್ಲಿ ಕರೆದುಕೊಂಡು ಹೋಗಿ ಅಳದಂಗಡಿಯ ಕೆದ್ದು ಶಾಲೆಯ ಮೈದಾನದಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ತನ್ನ ಸಹೋದರಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನೊಬ್ಬ ಸ್ನೇಹಿತರೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿತೇಶ್ (22) ಸುಮಾರು 3 ತಿಂಗಳಿನಿಂದ ಇನ್ಟ್ರಾಗ್ರಾಂ ನಲ್ಲಿ ಪರಿಚಯವಾದ ಹುಡುಗಿಯೊಂದಿಗೆ ಚಾಟಿಂಗ್ ಮಾಡುತ್ತಿದ್ದ. ಈ ವಿಚಾರ ಆಕೆಯ ಮನೆಯವರಿಗೆ ಗೊತ್ತಾಗಿ ಆಕೆಯ ಅಣ್ಣ ರಂಜಿತ್ ಎಂಬಾತ ಕೋಪಗೊಂಡು ದಿನಾಂಕ: 24-07-2022 ರಂದು ತನ್ನ ಗೆಳೆಯರಾದ ಪ್ರವೀಣ, ವಿಜೇತ್ ,ಪ್ರದೀಪ್ ಮತ್ತು ಸುಕೇಶ್ ಎಂಬವರೊಂದಿಗೆ ಕೆಎ 07-ಎಂ 3480 ನೇ ಬೊಲೋರೊ ವಾಹನದಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ದರ್ಪಿಂಜ ಸೇತುವೆಯ ಬಳಿ ಬಂದು ನಿತೇಶ್ ಸ್ಕೂಟರನ್ನು ತಡೆದು ನಿಲ್ಲಿಸಿ ನಾಲ್ವರು ಗೆಳೆಯರೊಂದಿಗೆ ಸೇರಿ ಮುಖಕ್ಕೆ ಕೈ ಕಾಲುಗಳಿಗೆ ಹೊಡೆದಿದ್ದಾನೆ. ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಬೊಲೋರಾ ವಾಹನದಲ್ಲಿ ಕುಳ್ಳಿರಿಸಿಕೊಂಡು ಕನ್ನಾಜೆ ರಸ್ತೆಯಿಂದಾಗಿ ಸವಣಾಲು ಮುಖಾಂತರ ಆಳದಂಗಡಿಯ ಕೆದ್ದು ಎಂಬಲ್ಲಿಗೆ ಕರೆದುಕೊಂಡು ಹೋಗಿ ಬೊಲೋರೊ ವಾಹನದಿಂದ ಕೆಳಗೆ ಇಳಿಸಿ ಪುನಃ ಅಲ್ಲಿ ಥಳಿಸಿದ್ದಾರೆ.
ಬಳಿಕ ರಂಜಿತ್ ನಿತೇಶ್ ನನ್ನು ಉದ್ದೇಶಿಸಿ “ಪುನಃ ನನ್ನ ತಂಗಿಗೆ ಮೆಸೇಜ್ ಅಥವಾ ಕಾಲ್ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಬೊಲೋರೊ ವಾಹನದೊಂದಿಗೆ ಸ್ಥಳದಿಂದ ಹೋಗಿರುತ್ತಾರೆ ಎಂದು ದೂರಿನಲ್ಲಿ ನಿತೇಶ್ ತಿಳಿಸಿದ್ದಾನೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ರಂಜಿತ್, ಪ್ರವೀಣ, ವಿಜೇತ್ ,ಪ್ರದೀಪ್ ಮತ್ತು ಸುಕೇಶ್ ವಿರುದ್ಧ ಕಲಂ IPC 143,147,341, 323,504,506 ಜೊತೆಗೆ 149 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ