ವಿಟ್ಲ: ಡಿಸೆಂಬರ್ 25ರಂದು ವಿಟ್ಲದಲ್ಲಿ ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ಮಹಿಳೆ ಮಾಡಿದ ನಾಟಕ ಅನ್ನೋದು ಬಯಲಾಗಿದೆ. ಪ್ರಕರಣದ ಬೆನ್ನು ಹತ್ತಿದ ವಿಟ್ಲ ಠಾಣಾ ಪೊಲೀಸರು ಮಹಿಳೆಯ ನಾಟಕವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 25 ರಂದು ಆಟೋ ಚಾಲಕ ರಫೀಕ್ ಹಾಗೂ ಅವರ ಪುತ್ರ ಮಧ್ಯಾಹ್ನ ನಮಾಜಿಗೆ ತೆರಳಿದ್ದ ವೇಳೆ ಮನೆಯೊಳಗೆ ನುಗ್ಗಿದ ವ್ಯಕ್ತಿ ಜೈನಾಬಿ ಎಂಬವರನ್ನು ಕಟ್ಟಿ ಹಾಕಿ, ಮೈಮೇಲಿದ್ದ ಚಿನ್ನವನ್ನು ಕಿತ್ತುಕೊಂಡು ಹಿಂಬದಿ ಬಾಗಿಲಿನಿಂದ ತಪ್ಪಿಸಿದ್ದಾನೆ ಎಂದು ದೂರಿನಲ್ಲಿ ಜೈನಾಬಿ ವಿವರಿಸಿದ್ದರು. ಈ ಸಂದರ್ಭ ಮಹಿಳೆಯೇ ಚಿನ್ನವನ್ನು ಬೇರೆಡೆಗೆ ಸಾಗಿಸಿರುವ ಘಟನೆ ಬೆಳಕಿಗೆ ಬಂದಿದೆ. ಇವರ ಪಕ್ಕದಲ್ಲಿ ವಾಸವಿರುವ ಪ್ರಿಯಕರನ ಕಿರುಕುಳಕ್ಕೆ ಮನೆ ಬದಲಿಸುವ ನಿರ್ಧಾರ ಮಾಡಿದ್ದು, ಯಾವ ರೀತಿಯಿಂದ ಹೇಳಿದರೂ ಆಕೆಯ ಪತಿ ಒಪ್ಪದೇ ಇದ್ದಾಗ ಈ ಕಳ್ಳತನದ ನಾಟಕವಾಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಹೆದರಿದ ಮಹಿಳೆ ಚಿನ್ನಾಭರಣವನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ ಎನ್ನಲಾಗಿದೆ. ಆಕೆಯ ಪ್ರಿಯಕರನ ತನಿಖೆಯ ಸಂದರ್ಭ ಒಟ್ಟು ಪ್ರಕರಣ ಬೆಳಕಿಗೆ ಬಂದಿದ್ದು, ಭಾಗಶಃ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.