ಸುಳ್ಯ: ನಿನ್ನೆ ಸುಳ್ಯದ ಕುಕ್ಕುಜಡ್ಕದಲ್ಲಿ ಬಾಲಕಿ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಾಸಾಯನಿಕ ಸ್ಪ್ರೇ ಸಿಂಪಡಿಸಿದ್ದಾರೆ ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದು ಬಾಲಕಿಯೇ ಹೆಣೆದ ಕಟ್ಟು ಕತೆ ಅನ್ನೋ ವಿಚಾರ ಗೊತ್ತಾಗಿದೆ.
ಕುಕ್ಕುಜಡ್ಕದ ಶಾಲೆಯ 9ನೇ ತರಗತಿ ಬಾಲಕಿ ನಿನ್ನೆ ಆನೇಕಾರ್ ಸಮೀಪ ರಸ್ತೆ ಬದಿಯಲ್ಲಿ ಬಿದ್ದಿದ್ದಳು. ಅದೇ ದಾರಿಯಲ್ಲಿ ಬಂದವರು ಆಕೆಯನ್ನು ಉಪಚರಿಸಿದಾಗ ಬೈಕ್ ನಲ್ಲಿ ಬಂದ ಅಪರಿಚಿತರು ರಾಸಾಯನಿಕ ಸ್ಪ್ರೇಯನ್ನು ಮುಖಕ್ಕೆ ಸಿಂಪಡಿಸಿದ್ರು ಎಂದಿದ್ದಳು. ಬಳಿಕ ಆಕೆಯನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಇದೇ ವಿಚಾರವನ್ನು ಆಕೆ ಪುನರುಚ್ಛರಿಸಿದ್ದಳು.
ಬಳಿಕ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬಾಲಕಿಯನ್ನು ಬೆಳ್ಳಾರೆ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಈ ವೇಳೆ ಬಾಲಕಿಯ ನಾಟಕ ಬಯಲಾಗಿದೆ. ಪೊಲೀಸರು ವಿಚಾರಣೆ ನಡೆಸುವಾಗ ನಾನು ಹೇಳಿದ್ದು ಕಟ್ಟು ಕತೆ ಎಂದು ಹೇಳಿದ್ದಾಳೆ. ಶಾಲೆಗೆ ಹೋಗೋದಕ್ಕೆ ಮನಸ್ಸಿಲ್ಲದ ಕಾರಣ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.