ಉಳ್ಳಾಲ : ಪಬ್ ಜಿ ಅನ್ನೋದು ಎಷ್ಟೊಂದು ಭಯಾನಕ ಆಟ ಅನ್ನೋದು ಈಗಾಗಲೇ ಎಷ್ಟೋ ಬಾರಿ ಸಾಬೀತಾಗಿದೆ. ಈಗಾಗಲೇ ಅದೆಷ್ಟೋ ಮಂದಿ ಈ ಆಟದಿಂದ ಸಾವನ್ನಪ್ಪಿದ್ದಾರೆ. ಇದೀಗ ಉಳ್ಳಾಲದ ಕೆ.ಸಿ. ರೋಡ್ ಬಳಿ ಬಾಲಕನ ಸಾವಿಗೆ ಪಬ್ ಜಿ ಆಟದಲ್ಲಿನ ದ್ವೇಷ, ಕಲಹವೇ ಕಾರಣ ಅನ್ನೋ ಭಯನಕ ವಿಚಾರ ಬಯಲಾಗಿದೆ.
ಹೌದು…ಕೆ.ಸಿ ರೋಡ್ ಕೊಮರಂಗಲ ನಿವಾಸಿ ಬಸ್ ಚಾಲಕ ಹನೀಫ್ ಎಂಬವರ ಪುತ್ರ ಆಕಿಫ್ (12) ಮೃತದೇಹ ಇಲ್ಲಿನ ಮೈದಾನದಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿತ್ತು. ಆಕಿಫ್ ಕೆ.ಸಿ. ನಗರದ ಫಲಾಹ್ ಸ್ಕೂಲ್ ನಲ್ಲಿ ಆರನೇ ತರಗತಿ ವಿದ್ಯಾರ್ಥಿಯಾಗಿದ್ದ. ಶನಿವಾರ ರಾತ್ರಿ 9ರ ವೇಳೆಗೆ ಮನೆಯಿಂದ ತೆರಳಿದ್ದ ಆಕಿಫ್ ಮತ್ತೆ ಹಿಂತಿರುಗಿ ಬಂದಿರಲಿಲ್ಲ. ಮನೆಯವರು ರಾತ್ರಿಯೇ ಆಕಿಫ್ ಗಾಗಿ ಶೋಧ ನಡೆಸುತ್ತಿದ್ದರು.
ಅನುಮಾನದ ಮೇರೆಗೆ ಆಕಿಫ್ ಜೊತೆಗೆ ಪಬ್ ಜಿ ಆಡುತ್ತಿದ್ದ ಸ್ಥಳೀಯ ಯುವಕ, ಉತ್ತರ ಪ್ರದೇಶ ಮೂಲದ ದೀಪಕ್ ಎಂಬಾತನ ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಆತ ಎಲ್ಲರನ್ನೂ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದ. ಆಕಿಫ್ ನಾಪತ್ತೆ ಕುರಿತು ರಾತ್ರಿಯೇ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೀಪಕ್ ಆನ್ ಲೈನ್ ನಲ್ಲಿ ಆಕಿಫ್ ಜೊತೆ ಪಬ್ ಜಿ ಆಟ ಆಡುತ್ತಿದ್ದು, ಆಟದಲ್ಲಿ ಆಕಿಫ್ ದೀಪಕ್ ನನ್ನು ನಿರಂತರವಾಗಿ ಸೋಲಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ದೀಪಕ್ ಗೆ ಆಕಿಫ್ ನೊಂದಿಗೆ ದ್ವೇಷ ಬೆಳೆದಿದ್ದು, ನೀನು ಬೇರೆ ಯಾರದೋ ಕೈಯಲ್ಲಿ ಮೊಬೈಲ್ ನೀಡಿ ನನ್ನನ್ನು ಸೋಲಿಸುತ್ತಿದ್ದೀಯಾ.. ಹಾಗಾಗಿ ನೀನು ನನ್ನ ಜೊತೆ ನೇರವಾಗಿ ಆಟಕ್ಕೆ ಬಾ ಎಂದು ನಿನ್ನೆ ರಾತ್ರಿ 9 ಗಂಟೆಗೆ ಆಕಿಫ್ ನನ್ನು ಕರೆದಿದ್ದ. ಸವಾಲು ಸ್ವೀಕರಿಸಿದ್ದ ಆಕಿಫ್, ದೀಪಕ್ ಜೊತೆ ಸಮೀಪದ ಫಲಾಹ್ ಸ್ಕೂಲ್ ಬಳಿಗೆ ತೆರಳಿದ್ದ. ಅಲ್ಲಿ ಇಬ್ಬರೂ ಆಟವಾಡಿದ್ದು, ಈ ವೇಳೆ ಆಕಿಫ್ ಸೋತಿದ್ದ ಎಂದು ದೀಪಕ್ ವಿವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಕಿಫ್ ಆಟದಲ್ಲಿ ಸೋತಿದ್ದನ್ನು ದೀಪಕ್ ಹೀಯಾಳಿಸಿದ್ದು, ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು ತಳ್ಳಾಟ ನಡೆದಿದೆ. ಆರೋಪಿ ದೀಪಕ್ ಬಾಲಕನನ್ನು ತಳ್ಳಿ ಕಲ್ಲು ಎಸೆದಿದ್ದು, ಇದರಿಂದ ತಲೆ, ಮುಖಕ್ಕೆ ಗಂಭೀರ ಗಾಯವಾಗಿ ಆಕಿಫ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದನ್ನು ಗಮನಿಸಿ, ಕಾಂಪೌಂಡ್ ಗೋಡೆಯ ಬದಿಗೆ ಒಯ್ದು ಮಲಗಿಸಿ ಏನೂ ಆಗಿಲ್ಲವೆಂಬಂತೆ ಮನೆಗೆ ಹಿಂತಿರುಗಿದ್ದ ಎಂದು ದೀಪಕ್ ನನ್ನು ತನಿಖೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ವತಃ ಪೊಲೀಸ್ ಕಮಿಷನರ್ ಸ್ಥಳಕ್ಕೆ ತೆರಳಿ, ವಿಚಾರಣೆ ನಡೆಸಿದ್ದು, ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಪಿ ದೀಪಕ್ ಉತ್ತರ ಪ್ರದೇಶ ಮೂಲದವನಾಗಿದ್ದು, ಆತನ ತಂದೆ 20 ವರ್ಷಗಳಿಂದ ಮಂಗಳೂರಿನಲ್ಲಿದ್ದು, ಎಂಟು ವರ್ಷಗಳಿಂದ ಕೆ.ಸಿ.ರೋಡ್ ನಲ್ಲಿರುವ ಲತೀಫ್ ಎಂಬವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.