ತಿರುವನಂತಪುರಂ: ಅನೇಕ ಮಂದಿ ನನ್ನ ಮದುವೆ ಅದ್ಧೂರಿಯಾಗಿ ನಡೆಯಬೇಕೆಂದು ಕನಸು ಕಾಣುತ್ತಾರೆ. ಆದರೆ ಇದರಲ್ಲಿ ಕೆಲವರಿಗೆ ನಿರಾಸೆ ಕೂಡ ಆಗಿರುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡ ತನ್ನ ಮದುವೆ ಅದ್ಧೂರಿಯಾಗಿ ನಡೆಯಬೇಕೆಂಬ ಕನಸು ಕಂಡಿದ್ದ. ಆದರೆ ವಿಧಿಯಾಟವೇ ಬೇರೆ ಆಗಿದ್ದು, ಆಸ್ಪತ್ರೆ ಬೆಡ್ ನಿಂದಲೇ ಆತ ವಧುವಿಗೆ ತಾಳಿ ಕಟ್ಟುವ ಸ್ಥಿತಿ ಎದುರಾಗಿದೆ.
ಹೌದು. ಕೇರಳದ ವೆಂಬಾಯಮ್ ನಲ್ಲಿ ಈ ಘಟನೆ ನಡೆದಿದೆ. ಮನೋಜ್ ಹಾಗೂ ರೇವತಿ ಆಸ್ಪತ್ರೆಯಲ್ಲಿ ವಿಶೇಷವಾಗಿ ಮದುವೆಯಾಗುವ ಮೂಲಕ ಸದ್ಯ ಸುದ್ದಿಯಾಗಿದ್ದಾರೆ. ಮನೋಜ್ ಹಾಗೂ ರೇವತಿಯ ಮದುವೆ ಫೆಬ್ರವರಿ 4ರಂದು ನಡೆಯಬೇಕಿತ್ತು. ಆದರೆ ಈ ಮಧ್ಯೆ ಮನೋಜ್ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯ ಬಂತು. ಈ ಹಿನ್ನೆಲೆಯಲ್ಲಿ ಮದುವೆಯ ಕನಸು ಕಂಡಿದ್ದ ಮನೋಜ್ ಆಸ್ಪತ್ರೆಗೆ ದಾಖಲಾದರು.
ಈ ಮೂಲಕ ಎರಡು ಕುಟುಂಬಗಳ ಅದ್ಧೂರಿ ಮದುವೆಗೆ ತಣ್ಣೀರೆರಚಿದಂತಾಗಿತ್ತು. ಆದರೂ ಈ ನಿರಾಸೆಯನ್ನು ಬದಿಗೊತ್ತಿ ಎರಡು ಕುಟುಂಬಗಳು ಕೂಡ ತಮ್ಮ ಮಕ್ಕಳಿಗೆ ಆಸ್ಪತ್ರೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದರು. ಅಂತೆಯೇ ಫೆಬ್ರವರಿ 6ರಂದು ಖಾಸಗಿ ಆಸ್ಪತ್ರೆಯಲ್ಲಿಯೇ ವಿಶೇಷವಾಗಿ ವಿವಾಹ ಸಮಾರಂಭ ನೆರವೇರಿಸಿದ್ದಾರೆ. ಇಬ್ಬರ ಕುಟುಂಬ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸಮ್ಮುಖದಲ್ಲಿ ಮನೋಜ್ ಹಾಗೂ ರೇವರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಆಸ್ಪತ್ರೆಯ ರೂಮನ್ನು ಮದುವೆ ಮಂಟಪವಾಗಿ ಮಾರ್ಪಾಡು ಮಾಡಿ ವಧು ಹಾಗೂ ವರರ ಮದುವೆ ನೆರವೇರಿಸಲಾಗಿದೆ. ಬೆಡ್ ನಲ್ಲಿ ಮಲಗಿದ್ದಲ್ಲಿದ್ದಂದ್ಲೇ ಮನೋಜ್ ಅವರು ರೇವತಿಗೆ ತಾಳಿ ಕಟ್ಟಿದರು. ಈ ಕ್ಷಣ ನೆರೆದಿದ್ದವರ ಕಣ್ಣೀರು ತರಿಸಿತು. ವಿವಾಹ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಇಓ ಡಾ. ಪಿ ಅಶೋಕ್, ಡಾ. ಲೈಜಾ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.