ಮಹಾರಾಷ್ಟ್ರ: ಇಲ್ಲಿನ ಜಲ್ಗೌನ್ ಜಿಲ್ಲೆಯ ಯವಲ್ ತಾಲ್ಲೂಕಿನ ಕಿಂಗೌನ್ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ.
ಟ್ರಕ್ ಮಗುಚಿ ಬಿದ್ದ ಪರಿಣಾಮ 16 ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ . ಮೃತಪಟ್ಟವರೆಲ್ಲರೂ ಕಾರ್ಮಿಕರಾಗಿದ್ದು ರವೆರ್ ಮತ್ತು ಕೆರ್ಹಲ ಜಿಲ್ಲೆಯ ಅಬೊಡಜದವರಾಗಿದ್ದಾರೆ.
ಕಿಂಗೌನ್ ಗ್ರಾಮದ ದೇವಸ್ಥಾನದ ಹತ್ತಿರ ಟ್ರಕ್ ನಲ್ಲಿ ಪಪ್ಪಾಯವನ್ನು ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಮಗುಚಿಬಿದ್ದು ನಿನ್ನೆ ರಾತ್ರಿ ದುರ್ಘಟನೆ ಸಂಭವಿಸಿದೆ. ಐವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಜಲ್ಗೌನ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದ ಸುದ್ದಿ ಕೇಳಿ ಆಘಾತವಾಗಿದೆ. ಮೃತರ ಕುಟುಂಬ ಸದಸ್ಯರಿಗೆ ಸಂತಾಪಗಳು, ಗಾಯಗೊಂಡವರು ಸೂಕ್ತ ಚಿಕಿತ್ಸೆ ಪಡೆದು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.