ಬೆಂಗಳೂರು: ಉಡುಪಿ ಜಿಲ್ಲೆಯಿಂದ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದವರು ಸುರಕ್ಷಿತವಾಗಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಹೇಳಿಕೆ ನೀಡಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಸತೀಶ್ ಎಂಬವರು ದೂರವಾಣಿ ಸಂಪರ್ಕ ಮಾಡಿ ಸ್ವಲ್ಪ ಕಷ್ಟ ಆಗಿದೆ, ಈಗ ಸುರಕ್ಷಿತವಾಗಿದ್ದೇವೆ ಅಂತಾ ಹೇಳಿದ್ದಾರೆ ಮತ್ತು ಬ್ರಹ್ಮಾವರದ ರಾಜೇಶ್ ಶೆಟ್ಟಿ ಮತ್ತು ಅವರ ತಂಡ ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ಯಾಕೇಜ್ ಟೂರ್ ಮೂಲಕ ಬ್ರಹ್ಮಾವರ ಮತ್ತು ಕುಂದಾಪುರ ಭಾಗದಿಂದ ತೆರಳಿರುವ ಇಪತ್ತು ಮಂದಿ ಪ್ರವಾಸಿಗರು ಇಂದು ಪೆಹೆಲ್ಗಾಮ್ ತೆರಳಬೇಕಾಗಿದ್ದು, ಉಗ್ರರ ದಾಳಿಯ ಕಾರಣದಿಂದಾಗಿ ಶ್ರೀನಗರದ ಸುತ್ತ ಮುತ್ತ ಪ್ರವಾಸ ಮುಂದುವರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್ 21 ರಂದು ಕಾಶ್ಮೀರಕ್ಕೆ ತೆರಳಿರುವ ತಂಡ, ನಿನ್ನೆ ಘಟನೆ ನಡೆದ ಸ್ಥಳದಿಂದ ಸುಮಾರು ನೂರೈವತ್ತು ಕಿಲೋ ಮೀಟರ್ ದೂರದಲ್ಲಿದೆ ಎಂದು ತಿಳಿದುಬಂದಿದೆ.
ತಂಡದ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಲ್ಲರೂ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ.