ನವದೆಹಲಿ: ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 13 ರಂದು ಬೆಂಗಳೂರಿನ ತಮ್ಮ ಮನೆಯಿಂದ ಬಂಧಿಸಲ್ಪಟ್ಟಿದ್ದ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ದೆಹಲಿಯ ಸೆಷನ್ ಕೋರ್ಟ್ ಇಂದು ಜಾಮೀನು ನೀಡಿದೆ.
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಯಾವ ರೀತಿ ಬೆಂಬಲ ನೀಡಬೇಕು ಎಂಬುದನ್ನು ವಿವರಿಸುವ ಟೂಲ್ ಕಿಟ್ ನ್ನು ಸಿದ್ಧಪಡಿಸಿ ಅದನ್ನು ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ ಆರೋಪ ದಿಶಾ ಮೇಲಿದ್ದು, ಇದೇ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.
ಇದೀಗ ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ದಿಶಾ ರವಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, 1 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿದೆ.
“ಟೂಲ್ಕಿಟ್ ಆರೋಪದಲ್ಲಿ ಬಂಧಿಸಲಾಗಿರುವ ದಿಶಾ ರವಿಗೆ ಜಾಮೀನು ನೀಡುವುದನ್ನು ತಡೆಯುತ್ತಿರುವ ಕಾನೂನು ಯಾವುದು? ದಿಶಾ ರವಿ ವಿರುದ್ಧದ ಆರೋಪಗಳು ಯಾವುವು? ಆಕೆಯ ವಿರುದ್ಧದ ಸಾಕ್ಷ್ಯಗಳು ಯಾವುವು?” ಎಂಬ ಮೂರು ಪ್ರಶ್ನೆಗಳನ್ನು ನ್ಯಾಯಾಲಯ ಪೊಲೀಸರಿಗೆ ಕೇಳಿತ್ತು. ಪಟಿಯಾಲ ಹೌಸ್ ಕೋರ್ಟ್ ಕಾಂಪ್ಲೆಕ್ಸ್ನ ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಧರ್ಮೇಂದರ್ ರಾಣಾರವರು ಫೆಬ್ರವರಿ 20 ರಂದು ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಮುಂದೂಡಿದ್ದರು.