ಬೆಂಗಳೂರು: ಇತ್ತೀಚೆಗಷ್ಟೇ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ಧೃವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾಗೆ ವಿವಾದದ ಕಿಡಿ ಹೊತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಹಿಂದೂಗಳನ್ನು ಅವಮಾನಿಸುವುದು, ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಫ್ಯಾಷನ್ ಆಗಿದೆ. ಇದೇ ರೀತಿ ಬೇರೆ ಧರ್ಮಗಳನ್ನು ಅಪಮಾನ ಮಾಡುವ ಧೈರ್ಯ ನಿಮಗಿದೆಯೇ? ಹಿಂದೂ ಧರ್ಮಗಳ ಭಾವನೆಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನಕಾರಿ ದೃಶ್ಯಗಳ ಆರೋಪದ ವಿವಾದದ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕರಂದ್ಲಾಜೆ, ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕಿ, ಮರು ಸೆನ್ಸಾರ್ ಆಗೋವರೆಗೆ ಚಿತ್ರಮಂದಿರಗಳಲ್ಲಿ ‘ಪೊಗರು’ ಚಿತ್ರದ ಪ್ರದರ್ಶನ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?
ಪೊಗರು ಚಿತ್ರದಲ್ಲಿ ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ ಬ್ರಾಹ್ಮಣನನ್ನ ಕಾಲಿನಿಂದ ಒದೆಯುವ ದೃಶ್ಯವಿದೆ. ಇಂತಹ ಸೀನ್ಗಳು ಬ್ರಾಹ್ಮಣರ ಭಾವನೆಗೆ ಧಕ್ಕೆ ತಂದಿದ್ದು, ನೋವುಂಟು ಮಾಡಿದೆ ಎಂದು ಚಿತ್ರತಂಡದ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಮಂಗಳವಾರ ಬ್ರಾಹ್ಮಣ ಸಮುದಾಯ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದೆ. ಅಲ್ಲದೆ ಎರಡ್ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಆಕ್ರೋಶ ಭುಗಿಲೆದ್ದಿತ್ತು.
ಪೊಗರು ಸಿನಿಮಾ ಆರಂಭದಿಂದಲೂ ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಲೇ ಇದೆ. ಈ ಹಿಂದೆ ಖರಾಬು ಹಾಡು ರಿಲೀಸ್ ಆದಾಗ ಈ ಹಾಡಿನಲ್ಲಿ ನಾಯಕಿಗೆ ಹಿಂಸೆ ನೀಡುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ನೀಡಲಾಗಿದೆ ಎಂದು ಮಹಿಳಾ ಸಂಘಟನೆಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಲ್ಲದೆ ಈ ಹಾಡನ್ನು ಸಿನಿಮಾದಿಂದ ಕೈ ಬಿಡುವಂತೆ ಒತ್ತಾಯಿಸಿದ್ದರು. ಇನ್ನು ಸಿನಿಮಾ ರಿಲೀಸ್ ಆದ ನಂತರ ಅಖಿಲ ಕರ್ನಾಟಕ ಮದ್ವಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಿನಿಮಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.