ಮೂಡಬಿದಿರೆ: ಬುದ್ಧಿ ಮಾತು ಹೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಟಿಪ್ಪರ್ ಹರಿಸಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮೂಡಬಿದರೆಯ ಕೋಟೆಬಾಗಿಲು ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕೋಟೆಬಾಗಿಲು ನಿವಾಸಿ ಫಯಾಝ್ (63) ಕೊಲೆಯಾದ ವ್ಯಕ್ತಿ.
ಹಾರಿಸ್ (32) ಎಂಬಾತ ಕೊಲೆ ಮಾಡಿದ ಪಾಪಿ ಟಿಪ್ಪರ್ ಚಾಲಕ. ಘಟನೆ ಬಳಿಕ ಆತ ಪರಾರಿಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಫಯಾಝ್ ಶುಕ್ರವಾರ ಮಧ್ಯಾಹ್ನ ಮಸೀದಿಗೆ ನಡೆದುಕೊಂಡು ಹೋಗುವ ಸಂದರ್ಭ ‘ಧೂಳೆಬ್ಬಿಸಬೇಡ, ನಿಧಾನವಾಗಿ ವಾಹನ ಚಲಾಯಿಸು. ಶಾಲಾ ಮಕ್ಕಳು ಹೋಗಿಬರುವ ದಾರಿ ಇದು’ ಎಂದು ಟಿಪ್ಪರ್ ಚಾಲಕ ಹಾರಿಸ್ ಗೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಅದು ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ಫಯಾಝ್ ಟಿಪ್ಪರ್ನ ಮೆಟ್ಟಿಲು ಹತ್ತಿದ್ದಾರೆ. ಆವಾಗ ಚಾಲಕ ಹಾರಿಸ್ ರಾಡ್ನಿಂದ ಫಯಾಝ್ರ ತಲೆಗೆ ಹೊಡೆದು ಟಿಪ್ಪರನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಟಿಪ್ಪರ್ನಿಂದ ಫಯಾಝ್ ಆಯ ತಪ್ಪಿ ರಸ್ತೆಗೆ ಬಿದ್ದರೂ ನಿಲ್ಲಿಸದ ಆರೋಪಿ ಹಾರಿಸ್ ಟಿಪ್ಪರನ್ನು ಅವರ ಮೇಲೆಯೇ ಹಾಯಿಸಿದ್ದಾನೆ. ಇದರಿಂದ ಫಯಾಝ್ರ ಕಾಲಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಸಾರ್ವಜನಿಕರು ಫಯಾಝ್ನನ್ನು ಆಸ್ಪತ್ರೆಗೆ ಸಾಗಿಸಿದರೂ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಬಳಿಕ ಆರೋಪಿ ಚಾಲಕನು ಟಿಪ್ಪರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.