Thursday, April 25, 2024
Homeಕರಾವಳಿಫೋನಿನಲ್ಲಿ ಕೇಳುವ ಕೊರೋನಾ ಜಾಗೃತಿ ಕರೆಯ ದ್ವನಿ ಯಾರದ್ದು ಗೊತ್ತೇ? ಸುಳ್ಯದ ಯುವತಿಯೇ ಈ ಜಾದುಗಾರ್ತಿ..

ಫೋನಿನಲ್ಲಿ ಕೇಳುವ ಕೊರೋನಾ ಜಾಗೃತಿ ಕರೆಯ ದ್ವನಿ ಯಾರದ್ದು ಗೊತ್ತೇ? ಸುಳ್ಯದ ಯುವತಿಯೇ ಈ ಜಾದುಗಾರ್ತಿ..

spot_img
- Advertisement -
- Advertisement -

ಪ್ರಸ್ತುತ ನಾವು ಯಾರಿಗೆ ಫೋನ್ ಮಾಡಿದರೂ, ಫೋನ್ ಕನೆಕ್ಟ್ ಆದ ತಕ್ಷಣ ಕೇಳುವ ದ್ವನಿಯೇ ಇದು. “ಕೊರೋನ ಕುರಿತು ಭಯ ಬೇಡ, ಮುಂಜಾಗ್ರತೆ ಕೈಗೊಳ್ಳಿ. ರೋಗವನ್ನು ವಿರೋಧಿಸಿ ರೋಗಿಗಳನ್ನಲ್ಲ. ಕೊರೋನ ಖಾಯಿಲೆಯನ್ನು ಹರಡದಂತೆ ಮಾಡಲು ಸಾಧ್ಯವಿದೆ. ಕೈ, ಬಾಯಿ ಸೋಪ್‌ನಿಂದ ತೊಳೆಯಿರಿ, ಪರಸ್ಪರ ಒಂದು ಮೀಟರ್ ಅಂತರ ಕಾಪಾಡಿಕೊಳ್ಳಿ ” ಎಂಬಂತಹ ಕೊರೋನ ಕುರಿತ ಜಾಗೃತಿಯ ಮಾತುಗಳು.

ಕೊರೋನಾ ಲಾಕ್ ಡೌನ್ ಆರಂಭದ ದಿನಗಳಲ್ಲಿ ಧ್ವನಿ ಸಂದೇಶ ಹೊಂದಿರುವ ಈ ಕಾಲರ್ ಟ್ಯೂನ್ ಹಿಂದಿಯಲ್ಲಿ ಬರುತ್ತಿತ್ತು. ಇದು ಕನ್ನಡಿಗರಿಗೆ ಕಿರಿ ಕಿರಿ ಅನ್ನಿಸಿದ್ದೂ ಇದೆ. ಜನ ತಮಾಷೆಯ ಮಾತುಗಳನ್ನಾಡಿದ್ದೂ ಇದೆ. ನಂತರ ಈ ದ್ವನಿ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಬರಲು ಪ್ರಾರಂಭಿಸಿತು. ಪ್ರತಿ ರಾಜ್ಯಗಳಲ್ಲೂ ಆಯಾ ರಾಜ್ಯ ಭಾಷೆಗಳಲ್ಲೇ ಈ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತದೆ. ಭಾರತದಲ್ಲಿ ಮೊಟ್ಟ ಮೊದಲ ಕೊರೋನ ಪ್ರಕರಣ ದಾಖಲಾದದ್ದು ಕೇರಳದಲ್ಲಿ. ಇಂತಹ ಕೇರಳದಲ್ಲಿ ಆ ರಾಜ್ಯ ಭಾಷೆಯಾಗಿರುವ ಮಲಯಾಳಂನಲ್ಲಿ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತಿದೆ. ಹೀಗೆ ಕೋಟ್ಯಾಂತರ ಕಿವಿಗಳನ್ನು ತಟ್ಟುತ್ತಿರುವ ಇಂತಹ ಸಂದೇಶದ ಹಿಂದಿನ ಧ್ವನಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆಣ್ಣು ಮಗಳದ್ದು.

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನೆಲೆಸಿರುವ ಟಿ.ವಿ. ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಯ ಪುತ್ರಿ ಟಿಂಟು ಮೋಳ್ ಅವರೇ ಧ್ವನಿಯ ಹಿಂದಿರುವ ಜಾದುಗಾರ್ತಿ. ಕೇರಳ ಮೂಲದ ಈ ಕುಟುಂಬ ಕಳೆದ 24 ವರ್ಷಗಳಿಂದ ಮರ್ಕಂಜದಲ್ಲಿ ನೆಲೆಸಿದ್ದಾರೆ.

ಕೊಟ್ಟಾಯಂ ಜಿಲ್ಲೆಯ ಪಾಲ ಎಂಬಲ್ಲಿಯವರಾದ ಟಿ.ವಿ ಜೋಸೆಫ್ 24 ವರ್ಷಗಳ ಹಿಂದೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಗುತ್ತಿಗಾರಿಗೆ ಬಂದಿದ್ದರು. ಆ ಬಳಿಕ ಕೆಲವೇ ವರ್ಷಗಳಲ್ಲಿ ಅವರ ಸಂಸಾರವೂ ಇಲ್ಲಿಗೆ ಬಂದು ನೆಲೆಯಾಯಿತು. ಕೆಲವು ವರ್ಷ ಗುತ್ತಿಗಾರಿನಲ್ಲಿದ್ದ ಬಳಿಕ ಒಂದಷ್ಟು ವರ್ಷ ಬಿ.ಸಿ.ರೋಡ್‌ನಲ್ಲಿದ್ದರು. ಬಳಿಕ ಮರ್ಕಂಜಕ್ಕೆ ಬಂದಿದ್ದು, ಕಳೆದ 12 ವರ್ಷಗಳಿಂದ ಸುಲು ಜಾರ್ಜ್ ಎಂಬವರು ಇಲ್ಲಿ ಖರೀದಿಸಿದ ರಬ್ಬರ್ ಎಸ್ಟೇಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಾ ಪತ್ನಿಯೊಂದಿಗೆ ವಾಸ್ತವ್ಯ ಹೂಡಿದ್ದಾರೆ.

ಯಾರೀಕೆ ಟಿಂಟು ಮೋಳ್?

ಟಿ.ವಿ. ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗಳು ಟಿಂಟು ಮೋಳ್, ಈಕೆಯ ತಮ್ಮ ಟಿಬಿನ್ ಸದ್ಯ ಮಸ್ಕತ್‌ನಲ್ಲಿದ್ದಾರೆ. ಟಿಂಟು ಮೋಳ್‌ಗೆ 9 ವರ್ಷವಿದ್ದಾಗ ಅವರು ತಂದೆಯೊಂದಿಗೆ ಸುಳ್ಯಕ್ಕೆ ಬಂದರು.

ಶಿಕ್ಷಣ:

  • ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ
  • ಬಂಟ್ವಾಳದ ಮೊಡಂಕಾಪು ಇನ್ಫೆಂಟ್ ಜೀಸಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ
  • ಮಂಗಳೂರಿನ ಸೈಂಟ್ ಅಗ್ನೇಸ್ ವಿದ್ಯಾಸಂಸ್ಥೆಯಲ್ಲಿ ಪಿ.ಯು.ಸಿ. ಹಾಗೂ ಪದವಿ ಶಿಕ್ಷಣ
  • ದೆಹಲಿಯ ಜವಾಹರ ಲಾಲ್‌ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆ.ಎನ್.ಯು.) ಅಂತರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಸ್ನಾತಕೋತ್ತರ ಪದವಿ

ದೆಹಲಿಯ ಜೆ.ಎನ್.ಯು. ಸೇರಿದ ಬಳಿಕ ಟಿಂಟು ಮೋಳ್ ಅವರಲ್ಲಿದ್ದ ಮಾತು, ಧ್ವನಿಯ ಪ್ರತಿಭೆ ಬೆಳಕಿಗೆ ಬಂತು. ಇದರೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದರು. ಜೆಎನ್‌ಯುನಲ್ಲಿದ್ದ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳ ಜಾನಪದ, ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉತ್ತೇಜಿಸುವ ಸಾಂಸ್ಕೃತಿಕ ಘಟಕದ ಸದಸ್ಯೆಯಾಗಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರು.

ಕಾಲೇಜಿನಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಣೆಯ ಮೂಲಕ ಮಿಂಚಿದ್ದರು. ಸಾಂಸ್ಕೃತಿಕ ವಿಭಾಗದ ಉಪನ್ಯಾಸಕ ಕೋ ಆರ್ಡಿನೇಟರ್ ಆಗಿದ್ದ ಈ ವಿಶ್ವವಿದ್ಯಾನಿಲಯದ ಕನ್ನಡ ಪೀಠದ ಮುಖ್ಯಸ್ಥರಾಗಿದ್ದ ಸುಳ್ಯದವರೇ ಆದ ಡಾ. ಪುರುಷೋತ್ತಮ ಬಿಳಿಮಲೆಯ ಪರಿಚಯವಾಗಿತ್ತು. ಟಿಂಟು ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದ ಬಿಳಿಮಲೆಯವರು ಮಾರ್ಗದರ್ಶನ ಹಾಗೂ ನೆರವು ನೀಡಿದ್ದರು.

ಹಿನ್ನಲೆ ದ್ವನಿಯ ಪಯಣ ಶುರುವಾಗಿದ್ದು ?

ದೆಹಲಿಯ ಖರ್ಚು ನಿಭಾಯಿಸಲು ಪಾರ್ಟ್ ಟೈಮ್ ಕೆಲಸವೊಂದರ ಅಗತ್ಯತತೆಯೂ ಟಿಂಟು ಮೋಳ್ ಅವರಿಗಿತ್ತು. ಈ ವೇಳೆ ಅವರ ಕನ್ನಡ ಧ್ವನಿಯ ಶಕ್ತಿಯನ್ನು ಅರಿತಿದ್ದ ಡಾ. ಬಿಳಿಮಲೆಯವರು ಕನ್ನಡ ವಾಯ್ಸ್ ಓವರ್ ನೀಡುವಂತೆ ಸಲಹೆ ನೀಡಿ ಅವರನ್ನು ದೆಹಲಿಯಲ್ಲಿ ಖ್ಯಾತ ಕನ್ನಡ ವಾಯ್ಸ್ ಆರ್ಟಿಸ್ಟ್ ಆಗಿರುವ ಸರವು ಕೃಷ್ಣ ಭಟ್‌ರವರಿಗೆ ಪರಿಚಯಿಸಿದರು.

ಹಾಗೆ ಟಿಂಟು ಅವರು ಕನ್ನಡ ಧ್ವನಿ ಪರೀಕ್ಷೆಗೆ ವಾಯ್ಸ್ ಇಂಡಸ್ಟ್ರಿಗೆ ತೆರಳಿದರು. ಅಲ್ಲಿ ತೇರ್ಗಡೆಗೊಂಡು ಒಂದೆರಡು ಬಾರಿ ಕನ್ನಡದ ಪ್ರಕಟನೆಗಳಿಗೆ ಧ್ವನಿ ನೀಡಿದರು. ಆದರೆ ಮಲಯಾಳಂ ಕೂಡ ಕರಗತವಾಗಿರುವ ಟಿಂಟು ಮೋಳ್‌ರವರಿಗೆ ಆ ಭಾಷೆಯ ಅವಕಾಶವೂ ಲಭಿಸಿತು. ಹಾಗೆ ಎರಡು ವರ್ಷಗಳಿಂದ ವಾಯ್ಸ್ ಇಂಡಸ್ಟ್ರಿಯಲ್ಲಿ ಕ್ರಿಯಾಶೀಲವಾಗಿರುವ ಟಿಂಟು ಮೋಳ್ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿಯಾಯಿತು. ತಕ್ಕ ಮಟ್ಟಿಗೆ ಆದಾಯವೂ ಬಂತು.

ಡಿಡಿ ಮಲಯಾಳಂನಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಿಗೆ ಟಿಂಟು ಮೋಳ್ ಧ್ವನಿ ನೀಡಿದ್ದಾರೆ. ಲೈವ್ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸರಕಾರದ ಅನೇಕ ಪ್ರಕಟಣೆಗಳಿಗೆ ತನ್ನ ಶಬ್ಧ ದಾಖಲಿಸಿದ್ದಾರೆ. ಸ್ವಚ್ಛ ಭಾರತ್ ಅಭಿಯಾನ್, ಭೀಮ್ ಯೋಜನೆ, ಭೇಟಿ ಬಚಾವೋ – ಭೇಟಿ ಪಡಾವೋ, ಪ್ರಧಾನಮಂತ್ರಿ ಗ್ರಾಮೀಣ ಆವಾಝ್ ಯೋಜನೆ, ಜನಧನ್ ಯೋಜನೆ, ಅಂಚೆ ಇನ್ಸೂರೆನ್ಸ್, ಪಲ್ಸ್ ಪೋಲಿಯೊ ಸೇರಿದಂತೆ ಶಿಕ್ಷಣ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಧ್ವನಿಯಾಗಿದ್ದಾರೆ. ಇದಲ್ಲದೆ ಡೆಟ್ಟಾಯಿಲ್, ಉಷಾ, ಪತಂಜಲಿ, ಮಂಚ್, ಮಿಲ್ಕಿ ಬಾರ್ ಮೊದಲಾದ ಕಂಪೆನಿಗಳ ಪ್ರಕಟಣೆಗಳಿಗೆ ಧ್ವನಿ ನೀಡಿದ್ದಾರೆ.

ಹೀಗಿರುತ್ತಾ ಮಾ.10 ರಂದು ಇನ್ನೋರ್ವ ಖ್ಯಾತ ವಾಯ್ಸ್ ಆರ್ಟಿಸ್ಟ್ ಕಲಾಭವನ್ ಪ್ರಜಿತ್ ಅವರ ಸೂಚನೆಯಂತೆ ಕೊರೋನ ಕುರಿತ ಜಾಗೃತಿಯ ಪ್ರಕಟಣೆಗೆ ಧ್ವನಿ ನೀಡಲು ಸ್ಟುಡಿಯೋಕ್ಕೆ ತೆರಳುತ್ತಾರೆ. ಹಿಂದಿಯಲ್ಲಿದ್ದ ಪ್ರಕಟನೆಯನ್ನು ಟಿಂಟು ಮೋಳ್ ಮಲಯಾಳಂ ಭಾಷೆಗೆ ತಾನೇ ಅನುವಾದಿಸಿ ಧ್ವನಿ ನೀಡುತ್ತಾರೆ.

ಹೆಚ್ಚೆಂದರೆ ಟಿ.ವಿ. ಅಥವಾ ರೇಡಿಯೋಗಳಲ್ಲಿ ಈ ಪ್ರಕಟನೆ ಬರಬಹುದೆಂಬ ನಿರೀಕ್ಷೆ ಅವರಿಗಿತ್ತು. ಆದರೆ ಆದದ್ದೇ ಬೇರೆ, ಫೋನ್ ಸಂದೇಶಕ್ಕಾಗಿ ಈ ಧ್ವನಿ ಸಂದೇಶ ಬಳಕೆಯಾಯಿತು. ಕೇಂದ್ರ ಸಚಿವಾಲಯದಿಂದ ಅನುಮತಿ ಬಂದ ಬಳಿಕ ಟಿಂಟು ಅವರೇ ಈ ಧ್ವನಿ ಸಂದೇಶವನ್ನು ಬಂಧುಗಳು, ಮಿತ್ರರಿಗೆ ಕಳುಹಿಸಿಕೊಟ್ಟಿದ್ದರು.

ನಂತರ ದಿನಗಳಲ್ಲಿ ಕೇರಳದ ಅಷ್ಟೂ ಫೋನ್‌ಗಳಿಗೆ ಜಗತ್ತಿನ ಎಲ್ಲಿಂದಲೇ ಕರೆ ಮಾಡಿದರೂ ಕೇಳುವುದು ಟಿಂಟು ಮೋಳ್ ಅವರ ನಿರರ್ಗಳ ಮಾತುಗಾರಿಕೆಯ ಮಧುರ ಧ್ವನಿ ಮತ್ತು ಸಂದೇಶ. ಸ್ವತಃ ಅವರೇ ಕೇರಳಕ್ಕೆ ಪೋನ್ ಮಾಡಿದಾಗಲೂ ಅವರದೇ ಸಂದೇಶ ಅವರಿಗೆ ಕೇಳತೊಡಗುತ್ತದೆ! ಇದು ಒಂದು ವಿಶಿಷ್ಟ ಅನುಭವ. ಮಲಯಾಳಂ ಮಾತ್ರವಲ್ಲ ಕನ್ನಡ ಸೇರಿದಂತೆ ಹಲವು ಭಾಷೆಗಳ ಧ್ವನಿ ಸಂದೇಶಗಳು ಕೂಡ ಇದೇ ಸ್ಟುಡಿಯೋದಲ್ಲಿ ದಾಖಲಾಗಿದೆ.

ಈ ಮೊದಲು ಟಿಂಟು ಟಿವಿ ಹಾಗೂ ರೇಡಿಯೋಗಳಲ್ಲಿ ಸಾಕಷ್ಟು ಪ್ರಕಟಣೆಗಳಿಗೆ ಧ್ವನಿ ನೀಡಿದ್ದರೂ ಅವರು ಅಷ್ಟೇನು ಗುರುತಿಸಲ್ಪಟ್ಟಿರಲಿಲ್ಲ. ಆದರೆ ಕೊರೋನ ಕಾರಣದಿಂದ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಟಿಂಟು ಶೈನಿಂಗ್ ಸ್ಟಾರ್ ಆಗಿದ್ದಾರೆ.

ಟಿಂಟು ಮೋಳ್ ಅವರ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುವ ಕನಸು ನನಸಾಗಲಿಲ್ಲ. ಆದರೆ ಅವರು ತನ್ನ ಬಹು ಮುಖ ಪ್ರತಿಭೆಯಿಂದ ದೆಹಲಿಯಲ್ಲಿ ಮಿಂಚುತ್ತಿದ್ದಾರೆ. ಉತ್ತಮ ನೃತ್ಯ ಹಾಗೂ ನಾಟಕ ಹಾಗೂ ಬೀದಿ ನಾಟಕ ಕಲಾವಿದೆಯೂ ಆಗಿರುವ ಅವರು ಈ ಕುರಿತ ಒಂದು ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಅನೇಕ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಕೂಚುಪುಡಿ, ಕಳರಿ ಕಲೆ ಕಲಿಯುತ್ತಿದ್ದಾರೆ.

ಕೇರಳ ಸಂಗೀತ ನಾಟಕ ಆಕಾಡೆಮಿ ನಡೆಸಿದ ಅಮೆಚೂರ್ ನಾಟಕ ಸ್ಫರ್ಧೆಯಲ್ಲಿ ಭಾಗವಹಿಸಿ ದೆಹಲಿ ವಲಯ ಮಟ್ಟದಲ್ಲಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಪಡೆದ ಟಿಂಟು ಮೋಳ್ ಅಭಿನಯಿಸಿದ ಈ ನಾಟಕಕ್ಕೂ ಪ್ರಶಸ್ತಿ ಬಂತು. ಬಳಿಕ ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿ ಲಭಿಸಿತು.

ಪುರುಷೋತ್ತಮ ಬಿಳಿಮಲೆಯವರು ನನ್ನ ಪ್ರತಿಭೆ ಗುರುತಿಸಿ ಸರವು ಕೃಷ್ಣ ಭಟ್ ಅವರಿಗೆ ಪರಿಚಯಿಸುವ ಮೂಲಕ ನನಗೆ ಅವಕಾಶಗಳ ಬಾಗಿಲು ತೆರೆಯಿತು. ಈ ಇಬ್ಬರು ನನ್ನ ಬೆಳವಣಿಗೆಗೆ ಕಾರಣ. ಈಗ ಹೆಚ್ಚಿನ ಅಫರ್‌ಗಳು ಬರುತ್ತಿದೆ. ಕೊರೋನ ಜಾಗೃತಿಯಂತಹ ಮಹಾನ್ ದೌತ್ಯದಲ್ಲಿ ನಾನೂ ಭಾಗವಾಗಿರುದಕ್ಕೆ ಹೆಮ್ಮೆ ಇದೆ. ಜನ ನನ್ನನ್ನು ಗುರುತಿಸಿದಕ್ಕೂ ಇದು ಸಾಧ್ಯವಾಯಿತು” ಎಂದು ಟಿಂಟು ಮೋಳ್ ಹೇಳುತ್ತಾರೆ.

“ನಾನು ಸುಳ್ಯಕ್ಕೆ ಬಂದಾಗಲೇ ನನಗೆ ಮಲಯಾಳಂ ಗೊತ್ತಿತ್ತು. ಆದರೆ ಮಾತೃ ಭಾಷೆ ಮರೆಯದಿರಲೆಂದು ತಂದೆಯವರು ಪತ್ರಿಕೆ, ಪುಸ್ತಕ ತಂದುಕೊಡುತ್ತಿದ್ದರು. ಕನ್ನಡದ ಧ್ವನಿ ಪರೀಕ್ಷೆಗೆಂದು ಹೋದ ನಾನು ಮಲಯಾಳಂನಲ್ಲಿ ಮಿಂಚುತ್ತಿರುವುದು ವಿಸ್ಮಯವೇ ಸರಿ. ಹವ್ಯಾಸಿಯಾಗಿ ಯಾರಿಗೇ ಆದರೂ ಈ ಕ್ಷೇತ್ರದಲ್ಲಿ ಮುಂದುವರಿಯಬಹುದು. ಹಲವರಿಗೆ ಮಾರ್ಗದರ್ಶವನ್ನೂ ಮಾಡುತ್ತಿದ್ದೇನೆ” ಎನ್ನುತ್ತಾರೆ ಅವರು.

“ಆರಂಭದಲ್ಲಿ ಶಬ್ಧ ಕೇಳಿ ಬಂಧುಗಳಷ್ಟೆ ಗುರುತಿಸಿದ್ದರು. ಆದರೆ ಇದೀಗ ಎಲ್ಲರೂ ಗುರುತಿಸುತ್ತಾರೆ” ಎನ್ನುವ ಟಿಂಟು ಅವರಿಗೆ ನಿಮ್ಮ ಧ್ವನಿಯನ್ನು ಕಾಪಾಡಿಕೊಳ್ಳಲು ಏನು ಮಾಡುತ್ತೀರಿ ಎಂದಾಗ “ಜೀರಿಗೆ ನೀರು ಕುಡಿಯುತ್ತೇನೆ” ಎಂದಷ್ಟೆ ಹೇಳಿ ನಕ್ಕು ಬಿಡುತ್ತಾರೆ.

ವರದಿಯ ಮೂಲ : ದುರ್ಗಾಕುಮಾರ್ ನಾಯರ್‌ಕೆರೆ ಫೇಸ್ ಬುಕ್ ಖಾತೆ

#ಕೋಟ್ಯಾಂತರ #ಕಿವಿಗಳಿಗೆ #ತಟ್ಟಿದ #ಕೊರೋನಾ #ಜಾಗೃತಿಯ #ಧ್ವನಿಯ #ಒಡತಿ #ಇವರು!#ಈಗ ಯಾರಿಗೇ ಆದರೂ ಫೋನ್ ಮಾಡಿದರೆ ತಕ್ಷಣ ಕೇಳುವುದು ಕೊರೊನಾ…

Posted by Durgakumar Nairkare on Monday, 11 May 2020

- Advertisement -
spot_img

Latest News

error: Content is protected !!