ಚೆನ್ನೈ: ಇಲ್ಲಿನ ಉರಪಕ್ಕಂ ಬಳಿ ರೈಲು ಹರಿದು ಕರ್ನಾಟಕ ಮೂಲದ ಮೂವರು ಬಾಲಕರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮಂಜುನಾಥ್ (11), ರವಿ (12), ಸುರೇಶ್ (14) ಎಂದು ಗುರುತಿಸಲಾಗಿದೆ. ಮೂಲತಃ ಅವರು ಹುಬ್ಬಳ್ಳಿಯವರೆಂದು ಹೇಳಲಾಗಿದೆ.
ಈ ದುರ್ಘಟನೆಯು ಹಳಿ ದಾಟುವಾಗ ನಡೆದಿದ್ದು, ಮೃತಪಟ್ಟ ಇಬ್ಬರು ಬಾಲಕರು ಸಹೋದರರಾಗಿದ್ದಾರೆ. ಅವರಿಬ್ಬರಿಗೂ ವಾಕ್ ಮತ್ತು ಶ್ರವಣ ದೋಷವಿತ್ತು. ಇನ್ನೊಬ್ಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ. ಮೂವರು ಕೂಡ 11ರಿಂದ 15ರ ಹರೆಯದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಚೆನ್ನೈನಲ್ಲಿ ಮೃತಪಟ್ಟ ಬಾಲಕರ ಪೋಷಕರು ದಿನಗೂಲಿ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದೆ. ವಂಡಲೂರು- ಉರಪ್ಪಕ್ಕಂ ನಡುವಿನ ರೈಲ್ವೆ ಹಳಿಯಲ್ಲಿ ಮೂವರು ಬಾಲಕರು ಆಟವಾಡುತ್ತಿದ್ದಾಗ ಚೆನ್ನೈ ಬೀಚ್ನಿಂದ ಚೆಂಗಲ್ಪೇಟ್ಗೆ ಹೋಗುತ್ತಿದ್ದ ಇಎಂಯು ರೈಲು ಢಿಕ್ಕಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಮಕ್ಕಳು ಆಟವಾಡುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಹಾರ್ನ್ ಮಾಡಿದ್ದಾರೆ. ಆದರೆ ಮಕ್ಕಳಿಗೆ ವಾಕ್ ಮತ್ತು ಶ್ರವಣ ದೋಷ ಇದ್ದ ಕಾರಣ ಇದು ಕೇಳಿಸಿಲ್ಲ. ಇದರಿಂದ ದುರ್ಘಟನೆ ನಡೆದಿದೆ.
ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.